ಉಡುಪಿ: ಇಂದಿನ ಆಧುನಿಕ ಕಾಲಘಟ್ಟದಲ್ಲಿ ಸಹಜಯೋಗ ಅವಶ್ಯಕ. ಮನುಷ್ಯನ ಒತ್ತಡ ಕಡಿಮೆ ಮಾಡಲು ಇದು ಬಹಳಷ್ಟು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.
ಸಹಜಯೋಗ ಪರಿವಾರದ ವತಿಯಿಂದ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಇಂದು ಆಯೋಜಿಸಿದ ಆತ್ಮಸಾಕ್ಷಾತ್ಕಾರ ಮತ್ತು ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿದಿನ ಸಹಜಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಿದೆ. ಹೀಗಾಗಿ ಈ ಸಹಜಯೋಗವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಜಯರಾಘವ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಹಜಯೋಗ ಪರಿವಾರದ ಪದ್ಮಾ ಗಂಗಾಧರ್, ಉಡುಪಿ ಸೆಂಟರ್ ಅಧ್ಯಕ್ಷ ವಿಷ್ಣುಮೂರ್ತಿ ಉಡುಪ, ಕಾರ್ಯಕರ್ತರಾದ ನವೀನ್ ಶೆಟ್ಟಿ, ಗೋವರ್ಧನ ತಿಂಗಳಾಯ, ಅಭಿಷೇಕ್ ಇದ್ದರು.
ಸಹಜಯೋಗ ಧ್ಯಾನೋತ್ಸವದ ಅಂಗವಾಗಿ ಗುರುವಾರ ಸಂಜೆ ಉಡುಪಿ ಕೃಷ್ಣಮಠದಿಂದ ಬೈಲೂರು ಮಹಿಷಮರ್ದಿನಿ ದೇವಸ್ಥಾನದವರೆಗೆ ಕಾಲ್ನಡಿಗೆ ಜಾಥವನ್ನು ಹಮ್ಮಿಕೊಳ್ಳಲಾಯಿತು.
ಜನರಿಗೆ ಸಹಜಯೋಗದ ಅರಿವು ಮೂಡಿಸಲಾಯಿತು. ಬಳಿಕ ಬೈಲೂರು ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ಆತ್ಮಸಾಕ್ಷಾತ್ಕಾರ ಮತ್ತು ಆರೋಗ್ಯ ಶಿಬಿರ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.












