ಉಡುಪಿ: ಭಾರತ ದೇಶಕ್ಕೆ 1975ರ ಜೂನ್ 25ರಂದು ಹೇರಳಾದ ತುರ್ತುಪರಿಸ್ಥಿತಿಗೆ 50 ವರ್ಷಗಳು ತುಂಬಿವೆ. ಈ ಕರಾಳ ದಿನವನ್ನು ಯಾವ ಭಾರತೀಯನು ಮರೆಯಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇದೊಂದು ಅತ್ಯಂತ ಕೆಟ್ಟ ದಿನ. ಸಂವಿಧಾನವನ್ನು ಹತ್ಯೆ ಮಾಡಿದ ದಿನ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡ ‘ಸಂವಿಧಾನ್ ಹತ್ಯಾ ದಿವಸ್’ (ತುರ್ತು ಪರಿಸ್ಥಿತಿಯ ಕರಾಳ ದಿನ) ಕಾರ್ಯಕ್ರಮದಲ್ಲಿ ತುರ್ತು ಪರಿಸ್ಥಿತಿಯ ಕರಾಳತೆಯನ್ನು ವಿಶ್ಲೇಷಿಸಿದರು.

ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಡಿಯಲ್ಲಿ ಸುರಕ್ಷಿತವಾಗಿ ಆಡಳಿತ ನಡೆಸಬೇಕಾದ ಅಂದಿನ ಅಧಿಕಾರಿಗಳು ತುರ್ತು ಪರಿಸ್ಥಿತಿಯನ್ನು ಯಾಕೆ ತಂದರೂ ಎಂಬುವುದು 50 ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಚುನಾವಣೆಯಲ್ಲಿ ಅಕ್ರಮ ಮಾಡಿದ್ದಾರೆ ಎಂಬ ಕಾರಣಕ್ಕೆ ಇಂದಿರಾ ಗಾಂಧಿಯವರ ಸದಸ್ಯತ್ವವನ್ನು ಅಹ್ಮದಾಬಾದ್ ಹೈಕೋರ್ಟ್ ರದ್ದುಗೊಳಿಸಿತ್ತು.
ಆ ಸಂದರ್ಭದಲ್ಲಿ ಅಧಿಕಾರ ಉಳಿಸಿಕೊಳ್ಳಬೇಕೆಂಬ ಒಂದೇ ಒಂದು ಕಾರಣಕ್ಕೆ ಸಂವಿಧಾನ 352ನೇ ಕಲಂ ಅನ್ನು ದುರುಪಯೋಗಪಡಿಸಿಕೊಂಡು ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶಾದ್ಯಂತ ತುರ್ತು ಪರಿಸ್ಥಿತಿಯನ್ನು ಹೇರಿದರು. ದೇಶಕ್ಕೆ ಅನಾಹುತವಾದಾಗ ತುರ್ತುಪರಿಸ್ಥಿತಿ ಘೋಷಿಸಿ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಲು ಇದ್ದ ಅವಕಾಶವನ್ನು ಅವರು ದುರುಪಯೋಗಪಡಿಸಿಕೊಂಡರು. ತುರ್ತುಪರಿಸ್ಥಿತಿ ಘೋಷಿಸಿ ಇಡೀ ಪ್ರತಿಪಕ್ಷವನ್ನು ಜೈಲಿಗೆ ಅಟ್ಟಿದರು. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ,ಜನಾಂಗ ತತ್ತರಗೊಂಡಿತು. ಇಡೀ ಭಾರತ ಜೈಲಾಗಿ ಪರಿವರ್ತನೆಗೊಂಡ ವಾತಾವರಣ ಸೃಷ್ಟಿಯಾಯಿತು ಎಂದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯಶ್ ಪಾಲ್ ಸುವರ್ಣ, ಮುಖಂಡರಾದ ಕೆ. ಉದಯಕುಮಾರ್ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ರೇಶ್ಮಾ ಉದಯ್ ಶೆಟ್ಟಿ ಉಪಸ್ಥಿತರಿದ್ದರು.












