ಎರಡು ವರ್ಷದಲ್ಲಿ ರಾಜ್ಯ ಸರಕಾರದಿಂದ ಉಡುಪಿಗೆ ಶೂನ್ಯ ಕೊಡುಗೆ

ಉಡುಪಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಶಾಸಕ ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರಕಾರ ಉಡುಪಿ ಜಿಲ್ಲೆಗೆ ಶೂನ್ಯ ಕೊಡುಗೆ ನೀಡಿದೆ.

ಎರಡು ವರ್ಷದಲ್ಲಿ ಈ ಸರ್ಕಾರದಿಂದ ಉಡುಪಿಯಲ್ಲಿ ಏನು ಅಭಿವೃದ್ಧಿಯಾಗಿದೆ?. ಹೊಸ ರಸ್ತೆ, ಹೊಸ ಅಂಗನವಾಡಿ ನಿರ್ಮಾಣ ಆಗಿದೆಯಾ?. ಖಾಲಿ ಹುದ್ದೆಗಳು ಭರ್ತಿಯಾಗಿದೆಯಾ? ಎರಡು ವರ್ಷದಲ್ಲಿ ಏನು ಮಾಡಿದ್ದಾರೆಂದು ಸಚಿವೆ ಹೆಬ್ಬಾಳ್ಕರ್ ಹೇಳಲಿ ಎಂದು ಸವಾಲು ಹಾಕಿದರು.

ಇಂಧನ ಇಲಾಖೆ ಬಗ್ಗೆ ಚರ್ಚೆ ಮಾಡುವುದಾದರೆ ಎರಡು ವರ್ಷ ಯಾಕೆ ಬಾಯಿ ಮುಚ್ಚಿ ಕುಳಿತಿದ್ದೀರಿ. ನಮಗೆ ಅಭಿವೃದ್ಧಿ ಸಚಿವರು ಬೇಕು, ವಿಸಿಟಿಂಗ್ ಡಾಕ್ಟರ್ ಬೇಡ. ಅಪರೂಪಕೊಮ್ಮೆ ಜಿಲ್ಲೆಗೆ ಬರುವ ಸಚಿವರು ನಮಗೆ ಬೇಡ. ಅಭಿವೃದ್ಧಿ ಕೆಲಸ ಮಾಡಿದರೆ ಟೀಕಿಸಲ್ಲ, 5 ಶಾಸಕರು ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಟಾಂಗ್ ನೀಡಿದರು.

ರಾಜ್ಯ ಸರ್ಕಾರದಿಂದ ಹಿಂದೂ ಟಾರ್ಗೆಟ್ ವಿಚಾರಕ್ಕೆ ಸಂಬಂಧಿಸಿದ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ಎಫ್ಐಆರ್ ದಾಖಲಿಸುತ್ತಾರೆ. ಹಿಂದೂ ಕಾರ್ಯಕರ್ತರನ್ನು ಮೊದಲು ಟಾರ್ಗೆಟ್ ಮಾಡಿದರು.

ಗಡಿಪಾರು ಬೆದರಿಸುವ ಪ್ರಯತ್ನ ಆಯಿತು ಈಗ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಕೆಲಸ ಆಗುತ್ತಿದೆ. ಸೂಲಿಬೆಲೆ ಅವರಿಗೆ ಕುಂದಾಪುರದಲ್ಲಿ, ಶ್ರೀಕಾಂತ್ ಶೆಟ್ಟಿಗೆ ಬಾಗಲಕೋಟೆಯಲ್ಲಿ ಅಡ್ಡಿ ಮಾಡಿದರು. ಈಗ ಮೋಹನ್ ದಾಸ್ ಪೈ ಮೇಲೆ fIR ಮಾಡಲು ಹೊರಟಿದ್ದಾರೆ. ತುರ್ತು ಪರಿಸ್ಥಿತಿಗೆ 50 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಮತ್ತೆ ತುರ್ತು ಪರಿಸ್ಥಿತಿ ಹೇರಲು ಹೊರಟಿದೆ.

ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ಮಣ್ಣುಮುಕ್ಕಿದ್ರು. ಇದೇ ರೀತಿಯಾದರೆ ರಾಜ್ಯದಲ್ಲಿ ಕಾಂಗ್ರೆಸ್ ಕೂಡ ಮಣ್ಣುಮುಕ್ಕುತ್ತದೆ. ಪ್ರಜಾಪ್ರಭುತ್ವದಲ್ಲಿ ಸರಕಾರ ಟೀಕೆಯನ್ನು ಎದುರಿಸಲು ಸಿದ್ದವಿರಬೇಕು ಎಂದರು.