ಇಸ್ರೇಲ್-ಇರಾನ್ ನಡುವೆ ಸಂಘರ್ಷ: ಇರಾನ್‌ನಿಂದ ತಾಯ್ನಾಡಿಗೆ ಮರಳಿದ 290 ವಿದ್ಯಾರ್ಥಿಗಳು

ನವದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವೆ ಉಂಟಾಗಿರುವ ಸಂಘರ್ಷದ ಹಿನ್ನೆಲೆ 290 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ವಿಮಾನವು ಶುಕ್ರವಾರ ತಡರಾತ್ರಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಇರಾನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಲು ಭಾರತ ಸರ್ಕಾರ ‘ಆಪರೇಷನ್ ಸಿಂಧು’ವನ್ನು ಪ್ರಾರಂಭಿಸಿದೆ.

ಇರಾನ್‌ನ ಮಶಾದ್‌ನಿಂದ 290 ವಿದ್ಯಾರ್ಥಿಗಳನ್ನು ಹೊತ್ತ ವಿಮಾನವು ದೆಹಲಿ ತಲುಪಿತು. ಇದರಲ್ಲಿ ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದ ವಿದ್ಯಾರ್ಥಿಗಳಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳ ಮರಳುವಿಕೆಗಾಗಿ ಕಾತರದಿಂದ ಕಾಯುತ್ತಿದ್ದ ಕುಟುಂಬಗಳಿಗೆ ಇದೊಂದು ಉತ್ತಮವಾದ ಕ್ರಮವಾಗಿದೆ. ಭಾರತ ಸರ್ಕಾರ, ವಿದೇಶಾಂಗ ಸಚಿವಾಲಯದ ಬೆಂಬಲಕ್ಕಾಗಿ ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘ ಧನ್ಯವಾದ ತಿಳಿಸಿದೆ.

ಇಂದು ತುರ್ಕಮೆನಿಸ್ತಾನದ ಅಶ್ಗಾಬತ್‌ನಿಂದ ಸುಮಾರು 1,000 ಭಾರತೀಯರನ್ನು ಹೊತ್ತ ಎರಡು ವಿಮಾನಗಳು ತಾಯ್ನಾಡಿಗೆ ಬರಲಿವೆ ಎಂದು ಶುಕ್ರವಾರ ತಡರಾತ್ರಿ ಅಧಿಕಾರಿಯೊಬ್ಬರು ತಿಳಿಸಿದ್ದರು.

ಇರಾನ್ ಮತ್ತು ಇಸ್ರೇಲ್ ನಡುವಿನ ವೈಮಾನಿಕ ಬಾಂಬ್ ದಾಳಿ ಮತ್ತು ಪ್ರತೀಕಾರದ ದಾಳಿಗಳಿಂದಾಗಿ ಭಾರತೀಯರನ್ನು ಸ್ಥಳಾಂತರಿಸುವಿಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.