ಕುಂದಾಪುರ: ಖಾಸಗಿ ಬಸ್ – ಬೈಕ್ ನಡುವೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು.

ಕುಂದಾಪುರ: ಬೈಕೊಂದು ಖಾಸಗಿ ಬಸ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕೊಲ್ಲೂರು ಮುಖ್ಯ ರಸ್ತೆಯ ನೆಂಪಕೆಂಚನೂರು ಸಮೀಪದ ಮಲ್ಲಾರಿ ತಿರುವಿನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಮೃತರನ್ನು ಸಿಗಂಧೂರು ಮೂಲದ ನಿವಾಸಿ ಶರತ್(24) ಎಂದು ಗುರುತಿಸಲಾಗಿದೆ. ವಂಡ್ಸೆ ಕಡೆಯಿಂದ ಹೆಮ್ಮಾಡಿ ಕಡೆಗೆ ಹೋಗುತ್ತಿದ್ದ ಬೈಕ್ ಹೆಮ್ಮಾಡಿ ಕಡೆಯಿಂದ ವಂಡ್ಸೆ ಕಡೆಗೆ ಬರುತ್ತಿದ್ದ ಶ್ರೀದುರ್ಗಾಂಬಾ ಬಸ್‌ಗೆ ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಶರತ್ ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.

ಢಿಕ್ಕಿಯ ತೀವ್ರತೆಗೆ ಬೈಕ್ ನಜ್ಜುಗುಜ್ಜಾಗಿದ್ದು, ಬೈಕ್ ರೇಡಿಯೇಟರ್ ಮೇಲೆ ಪೆಟ್ರೋಲ್ ಬಿದ್ದ ಕಾರಣ ಬೈಕ್‌ಗೆ ಬೆಂಕಿ ಹೊತ್ತಿಕೊಂಡು ಭಾಗಶಃ ಸುಟ್ಟು ಹೋಗಿದೆ. ಸ್ಥಳಕ್ಕೆ ಶಂಕರನಾರಾಯಣ ಠಾಣೆಯ ವೃತ್ತನಿರೀಕ್ಷಕ ಜಯರಾಮ್ ಡಿ.ಗೌಡ, ಕುಂದಾಪುರ ಸಂಚಾರಿ ಠಾಣೆಯ ಪಿಎಸೈ ಪ್ರಸಾದ್ ಕುಮಾರ್ ಭೇಟಿ ನೀಡಿದ್ದಾರೆ.

ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.