ಉಡುಪಿ: ಉಡುಪಿ ನಗರ ವ್ಯಾಪ್ತಿಯಲ್ಲಿರುವ ಆಯಾ ಆಟೋ ನಿಲ್ದಾಣಗಳಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ನಗರದ ಯಾವುದೇ ನಿಲ್ದಾಣದ ಆಟೋ ಚಾಲಕರಿಗೆ ಬಾಡಿಗೆ ಮಾಡಲು ಅವಕಾಶ ಕಲ್ಪಿಸಿ ಉಡುಪಿ ನಗರ ನಿಲ್ದಾಣಗಳ ಚಾಲಕರ ಮತ್ತು ಮಾಲಕರ ಒಕ್ಕೂಟ ಒಮ್ಮತದ ನಿರ್ಧಾರ ಕೈಗೊಂಡಿದೆ.
ಬನ್ನಂಜೆ ನಾರಾಯಣಗುರು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಉಡುಪಿ ನಗರ ನಿಲ್ದಾಣಗಳ ಚಾಲಕರ ಮತ್ತು ಮಾಲಕರ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿ ಈ ಕುರಿತು ತೀರ್ಮಾನ ಕೈಗೊಂಡಿದ್ದಾರೆ. ಈ ಹಿಂದೆ ಕೆಲವೊಂದು ಆಟೋ ಚಾಲಕರ ಮಧ್ಯೆ ನಡೆದ ಗಲಾಟೆಗಳಿಂದ ಎಲ್ಲ ಆಟೋ ಚಾಲಕರಿಗೆ ಸಮಸ್ಯೆ ಉಂಟಾಗಿತ್ತು. ಅಲ್ಲದೆ, ಪೊಲೀಸ್ ಕೇಸ್ ಗಳಿಂದ ಆಟೋ ಚಾಲಕರಿಗೆ ತುಂಬಾ ತೊಂದರೆ ಆಗಿತ್ತು. ಈ ಹಿನ್ನೆಲೆಯಲ್ಲಿ ಸಭೆ ನಡೆಸಿದ ಉಡುಪಿ ನಗರ ವ್ಯಾಪ್ತಿಯ ಆಟೋ ಚಾಲಕರು ಈ ತೀರ್ಮಾನ ಕೈಗೊಂಡಿದ್ದಾರೆ.
ಆಟೋ ನಿಲ್ದಾಣದ ಸಾಮರ್ಥ್ಯಕ್ಕೆ ಅನುಗುಣವಾಗಿ ಏಕಕಾಲದಲ್ಲಿ ಐದು ರಿಕ್ಷಾಕ್ಕಿಂತ ಕಡಿಮೆ ಇದ್ದಲ್ಲಿ ಅನ್ಯ ನಿಲ್ದಾಣದ ಆಟೋಗೆ ಬಾಡಿಗೆ ಮಾಡಲು ಅವಕಾಶ ಕಲ್ಪಿಸಿ ನಿರ್ಣಯ ಕೈಗೊಳ್ಳಲಾಗಿದೆ. ಈ ತೀರ್ಮಾನಕ್ಕೆ ಎಲ್ಲ ಆಟೋ ಚಾಲಕರು ಬದ್ಧರಾಗಿದ್ದಾರೆ ಎಂದು ಒಕ್ಕೂಟ ತಿಳಿಸಿದೆ.ಬಳಿಕ ಕಾಲ್ನಾಡಿಗೆಯಲ್ಲಿ ಎಸ್ಪಿ ಕಚೇರಿಯವರೆಗೆ ರಿಕ್ಷಾ ಚಾಲಕರು ತೆರಳಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎಸ್ಪಿ ಹರಿರಾಮ್ ಶಂಕರ್ ಅವರು, ನಗರಸಭೆ, ಆರ್ ಟಿಒ ಹಾಗೂ ಪೊಲೀಸ್ ಇಲಾಖೆ ನಗರದಲ್ಲಿ ಸರ್ವೇ ನಡೆಸಿದ್ದು, ನಗರದಲ್ಲಿ ಹೆಚ್ಚುವರಿ ರಿಕ್ಷಾ ನಿಲ್ದಾಣಗಳನ್ನು ನಿರ್ಮಿಸುವ ಬಗ್ಗೆ ಪ್ರಸ್ತಾವನೆ ತಯಾರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಶೀಘ್ರವೇ ಚರ್ಚೆ ನಡೆಸಿ ನಿಲ್ದಾಣ ನಿರ್ಮಿಸಲು ಕ್ರಮಕೈಗೊಳ್ಳುತ್ತೇವೆ. ಆ ಬಳಿಕ ರಿಕ್ಷಾ ಚಾಲಕರ ಬಹುತೇಕ ಸಮಸ್ಯೆ ಬಗೆಹರಿಯಲಿದೆ ಎಂದರು.












