ಪಂಚಗಂಗಾ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿಯಾಗಿ 5 ಬೋಗಿಗಳ ಜೋಡಣೆ.

ಕುಂದಾಪುರ: ಸುಬ್ರಹ್ಮಣ್ಯ – ಸಕಲೇಶಪುರ ರೈಲ್ವೆ ಹಳಿ ವಿದ್ಯುದ್ದೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಕಾರವಾರ – ಯಶವಂತಪುರ ಹಗಲು ರೈಲು ಸಂಚಾರವನ್ನು ಸ್ಥಗಿತಗೊಳಿಸುತ್ತಿದ್ದು, ಅದಕ್ಕೆ ಪರ್ಯಾಯವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಪಂಚಗಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚುವರಿಯಾಗಿ 5 ಬೋಗಿಗಳನ್ನು ಜೋಡಿಸಲಾಗುತ್ತಿದೆ. ಜೂ.11 ರಿಂದ ಅನ್ವಯವಾಗಲಿದೆ.

ಕುಂದಾಪುರ, ಉಡುಪಿ, ಕಾರವಾರ ಭಾಗದ ಜನರಿಗೆ ಅನುಕೂಲವಾಗಿದ್ದ ಹಗಲು ರೈಲು ಸಂಚಾರವನ್ನು ಕಾಮಗಾರಿ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸುತ್ತಿರುವುದರಿಂದ ಈ ಮಾರ್ಗವಾಗಿ ಬೆಂಗಳೂರಿಗೆ ರಾತ್ರಿ ವೇಳೆ ಹೆಚ್ಚುವರಿ ರೈಲು ಒದಗಿಸುವಂತೆ ನೈಋತ್ಯ ರೈಲ್ವೆಗೆ ಕುಂದಾಪುರದ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಮನವಿ ಮಾಡಿತ್ತು. ಈ ಬಗ್ಗೆ ಸಂಸದ ಕೋಟ ಶ್ರೀನಿವಾಸಪೂಜಾರಿ ಅವರಿಗೂ ಮನವಿ ಮಾಡಿದ್ದರು.ಈಗ ಪಂಚಗಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚುವರಿಯಾಗಿ 5 ಬೋಗಿಗಳನ್ನು ಜೋಡಣೆ ಮಾಡಲಾಗಿದೆ.

ರೈಲು ಕಾರವಾರದಿಂದ ಪ್ರತಿ ದಿನ ಸಂಜೆ 4 ಕ್ಕೆ ಹೊರಡಲಿದ್ದು, ರಾತ್ರಿ 8.30 ಕ್ಕೆ ಕುಂದಾಪುರ, 9 ಕ್ಕೆ ಉಡುಪಿ, ಮರುದಿನ ಬೆಳಗ್ಗೆ 7 ಕ್ಕೆ ಬೆಂಗಳೂರು ತಲುಪುತ್ತದೆ. ಹಾಗೆಯೇ ಬೆಂಗಳೂರಿನಿಂದ ಪ್ರತಿ ದಿನ ಸಂಜೆ 6.45ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 5 ಕ್ಕೆ ಕುಂದಾಪುರ, 9 ಕ್ಕೆ ಕಾರವಾರ ತಲುಪುತ್ತದೆ. ಈ ರೈಲು ವೇಳಾಪಟ್ಟಿ ಉತ್ತಮವಾಗಿದ್ದು, ಬದಲಾಯಿಸಬಾರದು ಎಂದು ಸಮಿತಿ ಅಧ್ಯಕ್ಷ ಗಣೇಶ್‌ ಪುತ್ರನ್‌ ಮನವಿ ಮಾಡಿದ್ದಾರೆ.