ಉಡುಪಿ: ಪ್ರೊ.ಕು.ಶಿ.ಹರಿದಾಸ ಭಟ್ ಜಾನಪದ ಪ್ರಶಸ್ತಿಗೆ ಡಿ.ಕೆ. ರಾಜೇಂದ್ರ, ವಿಜಯಶ್ರೀ ಸಬರದ ಆಯ್ಕೆ

ಉಡುಪಿ: ಸಾಹಿತ್ಯ, ಶಿಕ್ಷಣ, ಆಡಳಿತ, ಸಂಘಟನೆ, ಜಾನಪದ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಅನುಪಮ ಸಾಧನೆ ಸಿದ್ಧಿಗಳಿಂದ ಲೋಕವಿಖ್ಯಾತರಾದ ಪ್ರೊ.ಕು.ಶಿ.ಹರಿದಾಸ ಭಟ್ ಶತಮಾ ನೋತ್ಸವ ಜಾನಪದ ಪ್ರಶಸ್ತಿ-2024ಕ್ಕೆ ನಿವೃತ್ತ ಪ್ರಾದ್ಯಾಪಕರಾದ ಡಾ.ಡಿ.ಕೆ. ರಾಜೇಂದ್ರ ರನ್ನು ಆಯ್ಕೆ ಮಾಡಲಾಗಿದೆ.

ಅದೇ ರೀತಿ ಪ್ರೊ.ಕು.ಶಿ.ಹರಿದಾಸ ಭಟ್ ಜಾನಪದ ಪ್ರಶಸ್ತಿ-2025ಕ್ಕೆ ಜಾನಪದ ವಿದ್ವಾಂಸೆ, ಲೇಖಕಿ ಡಾ.ವಿಜಯಶ್ರೀ ಸಬರದ ಅವರು ಆಯ್ಕೆ ಯಾಗಿದ್ದಾರೆ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.

ಈ ಎರಡೂ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಜೂ.21ರಂದು ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ.ಡಿ.ಕೆ.ರಾಜೇಂದ್ರ: ಪ್ರೊ.ಕು.ಶಿ.ಹರಿದಾಸ ಭಟ್‌ರ ಜನ್ಮ ಶತಮಾನೋತ್ಸವ ನೆನಪಿಗಾಗಿ ವಿಶೇಷವಾಗಿ ಕೊಡಮಾಡುವ ಪ್ರೊ.ಕು.ಶಿ. ಹರಿದಾಸ ಭಟ್ ಶತಮಾನೋತ್ಸವ ಜಾನಪದ ಪ್ರಶಸ್ತಿ-2024ಕ್ಕೆ ಆಯ್ಕೆ ಯಾದ ಜಾನಪದ ವಿದ್ವಾಂಸ ಡಾ.ಡಿ.ಕೆ.ರಾಜೇಂದ್ರ ಅವರು ಮೂಲತಃ ತುಮಕೂರು ಜಿಲ್ಲೆಯ ತುರು ವೇಕೆರೆ ತಾಲೂಕಿನ ದಂಡಿನಶಿವರದಲ್ಲಿ (13.04.1942ರಲ್ಲಿ) ಜನಿಸಿದರು. ಎಂಎ ಪದವೀಧರರಾದ ಇವರು ‘ದಕ್ಷಿಣ ಕರ್ನಾಟಕದ ಜನಪದ ರಂಗಭೂಮಿ’ ಕುರಿತ ಪ್ರಬಂಧಕ್ಕೆ ಮೈಸೂರು ವಿವಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನ ಸಹಾಯಕರಾಗಿ ಸೇರಿದ ರಾಜೇಂದ್ರ, ನಂತರ ಉಪನ್ಯಾಸಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಬರವಣಿಗೆಯ ಕ್ಷೇತ್ರದಲ್ಲಿ ಪ್ರಬಂಧ ಸಾಹಿತ್ಯ, ವಿಚಾರ ಸಾಹಿತ್ಯ, ವಿಮರ್ಶೆ, ವ್ಯಕ್ತಿಚಿತ್ರಣ, ಮಕ್ಕಳ ಸಾಹಿತ್ಯ, ಜಾನಪದ ಸಂಗ್ರಹ, ಗ್ರಂಥ ಸಂಪಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.

ಡಾ.ರಾಜೇಂದ್ರ ಅವರ ಜಾನಪದಕ್ಕೆ ಸಂಬಂಧಿಸಿದ ಕೃತಿಗಳಲ್ಲಿ ‘ಜಾನಪದ ಸಮೀಕ್ಷೆ’, ‘ಜಾನಪದ ಸಂಚಯ’, ‘ಜಾನಪದ ಸಮಾಲೋಕ’, ’ಮುರಾವು’, ’ಜಾನಪದ:ಕೆಲವು ಗ್ರಹಿಕೆಗಳು’, ‘ಜಾನಪದ ಮತ್ತು ಶಿಷ್ಟಪದ’, ಕರಪಾಲ ದವರು, ಜನಪದ ನಂಬಿಕೆಗಳು ಮುಖ್ಯವಾದವು. ಕರಪಾಲಮೇಳ, ನಮ್ಮ ಸುತ್ತಿನ ನಂಬಿಕೆಗಳು, ಶಿಶು ಪ್ರಾಸಗಳು ಅವರ ಸಂಪಾದಿತ ಕೃತಿಗಳು. ಅಲ್ಲದೆ ಕರ್ನಾಟಕದ ಗೊಂಬೆ ಆಟಗಳು, ಮೈಲಾರಲಿಂಗ, ಮೂಡಲಪಾಯ, ಯಕ್ಷಗಾನ ಬಯಲಾಟ ಮುಂತಾದ ಮಕ್ಕಳ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಶಿಷ್ಟ ಹಾಗೂ ಜಾನಪದ ಕ್ಷೇತ್ರಗಳೆರಡರಲ್ಲೂ ಸಾಹಿತ್ಯ ಕೃಷಿ ಮಾಡಿರುವ ಇವರು ಹಲವಾರು ಪುಸ್ತಕ ಬಹುಮಾನವಲ್ಲದೆ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಡಾಮಿಯ ಜಾನಪದ ತಜ್ಞ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಸಾಹಿತ್ಯಶ್ರೀ’ ಪ್ರಶಸ್ತಿ, ಕುವೆಂಪು ವಿಶ್ವಮಾನವ ಪ್ರಶಸ್ತಿ, ಸಿಂಗಾರಿ ಗೌಡ ಸಾಹಿತ್ಯ ಪ್ರಶಸ್ತಿ, ಎಚ್. ಎಲ್. ನಾಗೇಗೌಡ ಜಾನಪದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಡಾ.ವಿಜಯಶ್ರೀ ಸಬರದ: 2025ರ ಸಾಲಿನ ಕು.ಶಿ.ಹರಿದಾಸ ಭಟ್ ಜಾನಪದ ಪ್ರಶಸ್ತಿಗೆ ಡಾ.ವಿಜಯಶ್ರೀ ಸಬರದ ಆಯ್ಕೆಯಾಗಿದ್ದಾರೆ. 68 ವರ್ಷ ಪ್ರಾಯದ ಲೇಖಕಿ ಡಾ. ವಿಜಯಶ್ರೀ ಸಬರದ ಬೀದರ್‌ನಲ್ಲಿ ಪದವಿ ಶಿಕ್ಷಣ ಪಡೆದರೆ ಧಾರವಾಡದ ಕರ್ನಾಟಕ ವಿವಿಯಿಂದ ಎಂ.ಎ., ಹಾಗೂ ಅನುಪಮಾ ನಿರಂಜನರ ಕಾದಂಬರಿಗಳು; ಒಂದು ಅಧ್ಯಯನ ಎಂಬ ಪ್ರಬಂಧಕ್ಕೆ ಗುಲಬರ್ಗಾ ವಿವಿಯಿಂದ ಪಿಎಚ್.ಡಿ. ಪದವಿ ಪಡೆದರು.

ಬೀದರ್‌ನ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ವೃತ್ತಿಜೀವನ ಆರಂಭಿಸಿದ ಅವರು ನಂತರ ಗುಲಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರವಾಚಕರಾಗಿ ಕಾರ್ಯ ನಿರ್ವಹಿಸಿದರು.

ಜಾನಪದ ಮತ್ತು ಮಹಿಳೆ, ಲೋಕ ಜಾನಪದ, ಸಬರದ ಮತ್ತುಜಾನಪದ (ವಿಮರ್ಶಾ ಕೃತಿಗಳು), ಗುರುಶಿಷ್ಯರ ತತ್ವಪದಗಳು, ಕೊನೂರ ಹಸನಾಸಾಬರ ತತ್ವಪದಗಳು, ನೀರಲಕೇರಿ ಬಸವಲಿಂಗ ಶರಣರು ಮತ್ತು ಇತರರ ತತ್ವಪದಗಳು, ಧರಿನಾಡಿನ ತತ್ವಪದಗಳು (ಸಂಪಾದಿತ ಕೃತಿಗಳು) ಸೇರಿದಂತೆ 20ಕ್ಕೂ ಹೆಚ್ಚು ಜಾನಪದ ಸಂಬಂಧಿ ಕೃತಿಗಳು ಪ್ರಕಟಗೊಂಡಿವೆ.

ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿ, ಗಿರಿಜಾದತ್ತಿ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ, ಬಸವ ಪುರಸ್ಕಾರ, ಅಲ್ಲದೇ ಅನೇಕ ಪುಸ್ತಕ ಬಹುಮಾನಗಳು ಲಭಿಸಿವೆ.