ಬಿಜೆಪಿಗೆ ಕೋಮು ವಿಷ ಬೀಜವನ್ನು ಬಿತ್ತುವುದು ಮಾತ್ರ ಕೆಲಸ: ಡಾ.ಮಂಜುನಾಥ ಭಂಡಾರಿ

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಒಬ್ಬ ಹಿಂದೂ ಸಮುದಾಯಕ್ಕೆ ಸೇರಿದ ಒಬ್ಬ ಹತ್ಯೆಯಾದರೆ ಹಿಂದೂ ನಾಯಕನ ಹತ್ಯೆ, ಮುಸ್ಲಿಮನಾದರೆ ಮುಸ್ಲಿಂ ಮುಖಂಡನ ಹತ್ಯೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ಹಾಗಿದ್ದರೆ ಹಿಂದೂ ನಾಯಕ ಯಾರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಗುಡುಗಿದರು.

ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಕಾರ್ಯಕರ್ತ ಅಂದರೆ ಯಾರು? ಮಂಜುನಾಥ ಭಂಡಾರಿ ಹಿಂದೂ ಅಲ್ಲವೇ ? ಇಲ್ಲಿ ಕುಳಿತಿರುವವರು ಹಿಂದೂಗಳಲ್ಲವೇ ? ಹಿಂದೂ ನಾಯಕನಾಗಲು ಆತ ರೌಡಿಶೀಟರ್ ಆಗಿರಬೇಕೇ ? ಅಕ್ರಮ ಮರಳುಗಾರಿಕೆ ಮಾಡಿರಬೇಕಾ ? ಅನೈತಿಕ ಚಟುವಟಿಕೆ ನಡೆಸಿರಬೇಕಾ ಎಂದು ಪ್ರಶ್ನಿಸಿದ ಅವರು ಇಂತವರು ಹಿಂದೂ ನಾಯಕರಾದರೆ, ಮಠದವರನ್ನು ಏನೆಂದು ಕರೆಯಬೇಕು. ಮಠಾಧೀಶರಿಗೆ ಏನು ಕೆಲಸ ? ಎಂದು ಪ್ರಶ್ನಿಸಿದರು.ಕೋಮು ವಿಷ ಬೀಜವನ್ನು ಬಿತ್ತುವುದು ಮಾತ್ರ ಬಿಜೆಪಿ ಕೆಲಸ ಆಗಿದೆ. ಹತ್ಯೆಯಾದವರು ಯಾವ ದಳದಿಂದ ಬಂದವರೆಂದು ಹೇಳಲಿ. ಹಿಂದೂ ನಾಯಕನ ಬಂಧನ? ಹಿಂದೂ ನಾಯಕನ ಹತ್ಯೆ ಎನ್ನುವುದನ್ನು ಬಿಡಲಿ. ಗಡಿಪಾರು ಆದವರು, ಕೇಸ್‌ಗಳಿರುವವರಿಗೆ ಹಿಂದೂ ನಾಯಕನ ಪಟ್ಟ ಕಟ್ಟುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಂದೆಗೆ ರಕ್ತ ಕೊಟ್ಟವನ ಕೊಲೆ: ಕೊಳತ್ತಮಜಲಿನಲ್ಲಿ ತಂದೆಗೆ ರಕ್ತವನ್ನು ಕೊಟ್ಟ ಅಬ್ದುಲ್ ರಹಿಮಾನ್‌ ನನ್ನು ಕರೆದು ಹತ್ಯೆ ಮಾಡಿರುವುದು, ಹಿಂದೂ ನಾಯಕರಿಗೆ, ಹಿಂದೂ ಸಮಾಜಕ್ಕೆ ಕಳಂಕ ಅಲ್ಲವೇ ? ವಿಶ್ವಾಸ ದ್ರೋಹ ಮಾಡುವುದನ್ನು , ಹತ್ಯೆಯನ್ನು ಯಾವುದೇ ಧರ್ಮ ಒಪ್ಪದು. ಹತ್ಯೆ ಮಾಡಿದವರಿಗೂ, ಹತ್ಯೆಗೆ ಪ್ರಚೋದನೆ ನೀಡಿದವರಿಗೂ ಶಿಕ್ಷೆ ಆಗಬೇಕು. ಕೇಸರಿ ಬಣ್ಣದ ವಸ್ತ್ರ ಧರಿಸಿದ ತಕ್ಷಣ ಆತ ಹಿಂದೂ ನಾಯಕ ಆಗಲ್ಲ. ಕೊಲೆಗಡುಕರಿಗೆ ಹಿಂದೂ ನಾಯಕ ಪಟ್ಟ ಕಟ್ಟುವುದು ಬೇಡ ಎಂದು ಎಚ್ಚರಿಸಿದರು.

ಅಧ್ಯಯನ ಸಮಿತಿ: ಸಾಮಾಜಿಕವಾಗಿ , ಆರ್ಥಿಕವಾಗಿ ಸಾಂಸ್ಕ್ರತಿಕವಾಗಿ ಕರಾವಳಿ ಮೂರು ದಶಕಗಳ ಹಿಂದೆ ಹೇಗಿತ್ತು ಎಂದು ಅಧ್ಯಯನ ಮಾಡಲು ಕಾಂಗ್ರೆಸ್ ಪಕ್ಷದಿಂದ ಅಧ್ಯಯನ ಸಮಿತಿಯನ್ನು ಮಾಡಲಾಗಿದೆ. ಈ ಸಮಿತಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಜ್ಯಸಭಾ ಸದಸ್ಯ ಸೈಯ್ಯದ್ ನಾಸೀರ್ ಹುಸೈನ್, ಎಐಸಿಸಿ ಕಾರ್ಯದರ್ಶಿ ಕೇರಳದ ರೋಜಿಜಾನ್, ಶಾಂತಿನಗರದ ಶಾಸಕ ಎನ್ ಎ ಹಾರೀಸ್, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಮತ್ತು ನನ್ನನ್ನು ಸಮಿತಿಗೆ ಸೇರಿಸಿದ್ದಾರೆ.

ಸಮಿತಿಯು ಗುರುವಾರ ಪಕ್ಷದ ಮುಂಚೂಣಿ ಘಟಕದ ಮುಖಂಡರ ಜತೆ ಚರ್ಚೆ ನಡೆಸಲಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದವರ, ವಿವಿಧ ಸಂಘಟನೆೆಯ ಮುಖಂಡರ , ಧಾರ್ಮಿಕ ಮುಖಂಡರ ಭೇಟಿ ಭೇಟಿ ಮಾಡಿ ಚರ್ಚೆ ಮಾಡಲಿದ್ದಾರೆ.

ಜೂ.9-11ರಂದು ಮತ್ತೆ ಭೇಟಿ ನೀಡಲಿದೆ ಇದೇ ರೀತಿ ಉಡುಪಿ ಮತ್ತು ಉತ್ತರ ಕನ್ನಡಕ್ಕೂ ಭೇಟಿ ಅಲ್ಲಿನ ಅಧ್ಯಯನ ನಡೆಸಿ ಕರಾವಳಿಯ ಲ್ಲಿ ಶಾಂತಿ ನೆಲೆಗೊಳಿಸುವ ನಿಟ್ಟಿನಲ್ಲಿ, ಸಾಮಾಜಿಕ,ಆರ್ಥಿಕ ಬೆಳವಣಿಗೆ ಬಗ್ಗೆ ಬದಲಾವಣೆಯ ಬಗ್ಗೆ ಪಕ್ಷದ ಮುಖ್ಯಸ್ಥರ ಮೂಲಕ ಸರಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಮಾಹಿತಿ ನೀಡಿದರು.

ಒಂದೊಮ್ಮೆ ದ.ಕ. ಜಿಲ್ಲೆ ಆರ್ಥಿಕತೆಯ ಬುನಾದಿಯಾಗಿತ್ತು. ಐದಾರು ಬ್ಯಾಂಕ್ ಇತ್ತು, ಹೋಟೆಲ್ ಉದ್ಯಮದಲ್ಲಿ ಮುಂದುವರಿದಿತ್ತು. ಶೈಕ್ಷಣಿಕವಾಗಿ ಹಲವಾರು ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಇಲ್ಲಿವೆ. ಇಲ್ಲಿ ಇರುವಷ್ಟು ಮೆಡಿಕಲ್ ಕಾಲೇಜು ದೇಶದ ಯಾವುದೇ ಜಿಲ್ಲೆಯಲ್ಲಿ ಇಲ್ಲ. ಈ ಜಿಲ್ಲೆ ಪ್ರತಿವರ್ಷ 15 ಸಾವಿರ ಇಂಜಿನಿಯರ್ ಗಳನ್ನು ದೇಶಕ್ಕೆ ಕೊಡುತ್ತದೆ. ಇಂತಹ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಏನು ಮಾಡಬೇಕು ಎನ್ನುವ ಬಗ್ಗೆ ಸರಕಾರ ಚಿಂತನೆ ನಡೆಸಿ ಇದೀಗ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ ಎಂದರು.

ದ.ಕ. ನೆಲಮಾರ್ಗ ,ಜಲಮಾರ್ಗ, ವಾಯುಮಾರ್ಗ ಸಂಪರ್ಕ ವ್ಯವಸ್ಥೆ ಇರುವ ಜಿಲ್ಲೆ, ಬುದ್ಧಿವಂತರ ಜಿಲ್ಲೆಯಾಗಿರುವ ಇಲ್ಲಿ ಒಂದು ಸಣ್ಣ ಘಟನೆ ನಡೆದರೆ ಅದು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಯಾಗುತ್ತದೆ. ಒಂದು ಘಟನೆ ನಡೆದಾಗ ಅಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸುವುದು ಸಹಜ ಪ್ರಕ್ರಿಯೆ. ಗಲಾಟೆ ನಿಯಂತ್ರಿಸಲು ವಿಫಲವಾದಾಗ ಅವರನ್ನು ಪ್ರಶ್ನಿಸುವ ಅಧಿಕಾರ ವಿಪಕ್ಷಕ್ಕೆ ಇದೆ. ಆದರೆ ವಿಪಕ್ಷ ಬಿಜೆಪಿ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಕೋಮುವಾದದ ಮರ ಬೆಳೆದಿದೆ: ಕಾಂಗ್ರೆಸ್ ನೇತೃತ್ವದ ಸರಕಾರ ಜನಪರ ಯೋಜನೆಯ ಮೂಲಕ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಒಂದೊಮ್ಮೆ ಭದ್ರವಾಗಿ ನೆಲೆಯೂರಿತ್ತು. ಲೋಕಸಭೆ, ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಿತ್ತು. ಜಿ ಪಂನ 31ರಲ್ಲಿ 30 ಸ್ಥಾನ ಜಯಸಿತ್ತು. ಇದನ್ನು ನೋಡಿದ ಬಿಜೆಪಿ ಅಭಿವೃದ್ಧಿ ಮಂತ್ರದ ಮೂಲಕ ಕಾಂಗ್ರೆಸ್‌ನ್ನು ಮಣಿಸಲು ಸಾಧ್ಯವಿಲ್ಲ ಎಂದು ಮನಗಂಡು, ಬಿಜೆಪಿ ಅಧಿಕಾರವನ್ನು ಪಡೆಯಲು 30 ವರ್ಷಗಳಿಂದ ಕೋಮುವಾದದ ವಿಷಬೀಜವನ್ನು ಬಿತ್ತಿತ್ತು. ಅದು ಇವತ್ತು ಹೆಮ್ಮರವಾಗಿ ಬೆಳೆದಿದೆ ಎಂದು ಹೇಳಿದರು.

ಇವತ್ತು ಕರಾವಳಿಯಲ್ಲಿ ಗಲಭೆ ನಡೆಯುತ್ತಿದೆ ಎನ್ನುವುದು ತಪ್ಪು. ದ.ಕ. ಜಿಲ್ಲೆಯ ತಾಲೂಕು ಒಂದರ ಕೇವಲ 10 ಕಿ.ಮಿ ವ್ಯಾಪ್ತಿಯಲ್ಲಿ ಹತ್ಯೆ ನಡೆಯುತ್ತಿದೆ. ಕೋಮು ಗಲಭೆ, ಕೋಮುಹತ್ಯೆ ಬೇರೆ . ಇದನ್ನು ನಾವು ಹತ್ತಿಕ್ಕಬೇಕಿದೆ. ಕರಾವಳಿ ಹೆಸರಿಗೆ ಯಾವುದೇ ಮಸಿ ಬೆಳೆಯುವ ಯತ್ನ ಬೇಡ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಕಾಂಗ್ರೆಸ್ ಮುಖಂಡರಾದ ಕೃಷ್ಣ ಶೆಟ್ಟಿ, ಪದ್ಮರಾಜ ಆರ್ ಪೂಜಾರಿ, ಲಾರೆನ್ಸ್ ಡಿ ಸೋಜ, ಮಹಮ್ಮದಾಲಿ ಸಂಪ್ಯ, ಜಿ.ಎ.ಬಾವಾ, ಪ್ರಕಾಶ್ ಸಾಲಿಯಾನ್, ವಿಶ್ವಾಸ್‌ ಕುಮಾರ್‌ ದಾಸ್ ಉಪಸ್ಥಿತರಿದ್ದರು.