ಉಡುಪಿ:’ಶಿಕ್ಷಣದ ಜೊತೆಗೆ ಸಂಸ್ಕಾರ ಪಡೆದು ಭವ್ಯ ಭಾರತದ ಸುಪ್ರಜೆಯಾಗಬೇಕು. ಶ್ರದ್ಧೆ, ಅನವರತ ಪ್ರಯತ್ನದಿಂದ ಸಾಧನೆ ಮಾಡಲು ಸಾಧ್ಯ. ಸ್ವಯಂ ಶಿಸ್ತನ್ನು ಅಳವಡಿಸಿಕೊಂಡಾಗ ಶೈಕ್ಷಣಿಕ ಸಾಧನೆ ಸಾಧ್ಯ. ಪೋಷಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಮನೆಯಲ್ಲಿ ಮಾಡಿದರೆ, ವಿದ್ಯಾ ಸಂಸ್ಥೆಯಲ್ಲಿ ಅಧ್ಯಾಪಕರು ಸಂಸ್ಕಾರಯುತ ಶಿಕ್ಷಣ ನೀಡುತ್ತಾರೆ’ ಎಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಗೌರವ ಮಹಾ ಕಾರ್ಯದರ್ಶಿ ಡಾ|ಎ.ಪಿ.ಭಟ್ ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರಂಭದ ಉದ್ಘಾಟನೆ ಹಾಗೂ ಪೂರ್ವ ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉಡುಪಿ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿಯ ಗೌರವ ಕಾರ್ಯದರ್ಶಿ ಡಾ|ಪಿ.ಎಸ್.ಐತಾಳ್ ರವರು “ಮಕ್ಕಳ ಗುರಿಯನ್ನು ಅತ್ಯುತ್ತಮವಾಗಿ ರೂಪಿಸುವಲ್ಲಿ ಪೋಷಕರ ಪಾತ್ರ ದೊಡ್ಡದು. ಗುಣಮಟ್ಟದ ಶಿಕ್ಷಣವನ್ನು ನೀಡಿ ಪೂರ್ಣಪ್ರಜ್ಞರಾಗಿಸುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ತಂತ್ರಜ್ಞಾನದಿಂದ ಪ್ರಗತಿ ಸಾಧ್ಯ’ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಕುಮಾರ್ ಕಾಲೇಜಿನ ನೀತಿ ನಿಯಮಗಳ ಬಗ್ಗೆ ತಿಳಿಸಿದರು. ಆಂಗ್ಲ ಭಾಷೆ ಉಪನ್ಯಾಸಕ ಧೀರಜ್ ಪ್ರಮಾಣವಚನ ಬೋಧಿಸಿದರು. ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಸಿಎ ಟಿ. ಪ್ರಶಾಂತ್ ಹೊಳ್ಳ ಉಪಸ್ಥಿತರಿದ್ದರು. ಆಂಗ್ಲಭಾಷಾ ಪ್ರಾಧ್ಯಾಪಕಿ ಸೀಮಾ ಕ್ರಾಸ್ತಾ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀದೇವಿ ಬಾಳಿಗ ನಿರೂಪಿಸಿದರು. ಜೀವಶಾಸ್ತ್ರ ಪ್ರಾಧ್ಯಾಪಕಿ ವೀಣಾ ಪ್ರಭು ವಂದಿಸಿದರು.












