ಉಡುಪಿ: ಹೆದ್ದಾರಿ ಬದಿ ಟೆಂಟ್‍ನಲ್ಲಿ ವಾಸವಿದ್ದ ಕುಟುಂಬಗಳ ಸ್ಥಳಾಂತರ

ಉಡುಪಿ: ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಉಡುಪಿ, ಜಿಲ್ಲಾ ನಾಗರಿಕ ಸೇವಾ ಸಮಿತಿ ಮತ್ತು ಲಯನ್ಸ್ ಕ್ಲಬ್, ಬ್ರಹ್ಮಗಿರಿ, ಇವರ ಜಂಟಿ ಕಾರ್ಯಾಚರಣೆಯಲ್ಲಿ ಮೂಲತಃ ಗದಗದವರಾಗಿರುವ 4 ಟೆಂಟ್‍ಗಳಲ್ಲಿ ವಾಸವಾಗಿರುವ 7 ಜನ ಕೂಲಿ ಕಾರ್ಮಿಕರನ್ನು ಒಳಗೊಂಡಂತೆ 12 ಮಕ್ಕಳೊಂದಿಗೆ ಕರಾವಳಿ ಬೈಪಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಟೆಂಟ್‍ನಲ್ಲಿ ವಾಸವಾಗಿದ್ದು, ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೆಪ್ಟಂಬರ್ 12 ರಂದು ಕಾರ್ಯಾಚರಣೆ ನಡೆಸಿ, ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ವಾಸವಾಗಿರುವ ಕುಟುಂಬಗಳ ಟೆಂಟ್‍ಗಳನ್ನು ಸ್ಥಳಾಂತರಿಸುವಂತೆ ಸೂಚಿಸುವ ಮೂಲಕ 3 ದಿನಗಳ ಕಾಲಾವಕಾಶ ನೀಡಿತ್ತಾದರೂ, ಟೆಂಟ್‍ಗಳನ್ನು ಖಾಲಿ ಮಾಡದ ಹಿನ್ನೆಲೆಯಲ್ಲಿ ಎಚ್ಚೆತ್ತ ಇಲಾಖೆ, ಸೋಮವಾರ ಜಿಲ್ಲಾ ನಾಗರೀಕ ಸೇವಾ ಸಮಿತಿ ನೆರವಿನೊಂದಿಗೆ ಟೆಂಟ್ ಸ್ಥಳಕ್ಕೆ ಭೇಟಿ ನೀಡಿ ಅದರಲ್ಲಿ 4 ಜನ ಪೋಷಕರನ್ನೊಳಗೊಂಡು 7 ಮಕ್ಕಳು ಅವರ ಸ್ವಂತ ಊರಿಗೆ ಹೋಗಲು ಇಚ್ಚಿಸಿದ್ದು, ತಮ್ಮಲ್ಲಿ ಹಣವಿಲ್ಲದೇ ಸರಿಯಾದ ಕೆಲಸವಿಲ್ಲದೇ ಇರುವುದರಿಂದ ಊರಿಗೆ ತೆರಳುವುದು ಕಷ್ಟವೆಂದು ಕೋರಿಕೊಂಡ ಮೇರೆಗೆ ಲಯನ್ಸ್ ಕ್ಲಬ್ ಬ್ರಹ್ಮಗಿರಿ ಇವರು ಅಷ್ಟು ಜನರಿಗೆ ಬಸ್ ದರವನ್ನು ನೀಡುವ ಮೂಲಕ ಅವರನ್ನು ಸ್ವಂತ ಊರಿಗೆ ಕಳುಹಿಸಲಾಯಿತು.

ಉಳಿದ 8 ಜನರು ರಾಷ್ಟ್ರೀಯ ಹೆದ್ದಾರಿ ಬದಿಯಿಂದ ಟೆಂಟ್ ತೆಗೆದು ದೂರದ ಸ್ಥಳದಲ್ಲಿ  ವಾಸವಾಗಿರುತ್ತಾರೆ.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಯಾನಂದ ಮತ್ತು ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಸಮಾಜ ಕಾರ್ಯಕರ್ತ ಯೋಗೀಶ್ ಹಾಗೂ ಜಿಲ್ಲಾ ನಾಗರೀಕ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ವಳಕಾಡು ಹಾಗೂ ತಾರಾನಾಥ ಮೇಸ್ತ, ಬ್ರಹ್ಮಗಿರಿ ಲಯನ್ಸ್ ಕ್ಲಬ್ ಇದರ ಸದಸ್ಯರಾದ ಉಮೇಶ್ ನಾಯಕ್, ವಾದಿರಾಜ, ವಾಸುದೇವ ಭಾಗವಹಿಸಿದ್ದರು.