ಉಡುಪಿ: ಕೇಂದ್ರ ಸರಕಾರದ ಕಾರ್ಮಿಕ ಸಂಹಿತೆಗಳ ವಿರುದ್ಧ ಪ್ರತಿಭಟನೆ

ಉಡುಪಿ: ಕೇಂದ್ರ ಸರಕಾರ ಜಾರಿ ಮಾಡಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ನಾಲ್ಕು ಕಾರ್ಮಿಕ ಸಂಹಿತೆಗಳ ಆದೇಶ ಪ್ರತಿಯನ್ನು ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅವರು, ಕೇಂದ್ರ ಸರಕಾರ ಜಾರಿ ಮಾಡಿರುವ ವೇತನ ಸಂಹಿತೆ-2019, ಕೈಗಾರಿಕಾ ಸಂಬಂಧಗಳ ಸಂಹಿತೆ-2020, ವೃತ್ತಿ ಆಧರಿತ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ-2020, ಸಾಮಾಜಿಕ ಸುರಕ್ಷತಾ ಸಂಹಿತೆ-2020 ಕಾಯಿದೆಯನ್ನು ಸರಕಾರ ವಾಪಾಸು ಪಡೆಯಬೇಕು. ಬ್ಯಾಂಕ್ ಖಾಸಗಿಕರಣ ನಿಲ್ಲಿಸಬೇಕು. ಬ್ಯಾಂಕ್‌ಗಳ ವಿಲೀನ ನಿಲ್ಲಿಸಬೇಕು. ಶ್ರೀಮಂತ ವರ್ಗದವರಿಗೆ ರಿಯಾಯಿತಿ ನೀಡಬಾರದು ಎಂದು ಆಗ್ರಹಿಸಿದರು.

ವಿಮಾ ನೌಕರರ ಸಂಘದ ಅಧ್ಯಕ್ಷ ವಿಶ್ವನಾಥ್ ಕೆ., ಎಐಟಿಯುಸಿ ಉಡುಪಿ ಮುಖಂಡರಾದ ಶಿವನಂದ, ಇಂಟಕ್ ಸಂಘಟನೆಯ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ, ಎಐಬಿಇಎ ಮುಖಂಡರಾದ ನಾಗೇಶ್ ನಾಯಕ್, ರಮೇಶ್, ದಲಿತ ಹಕ್ಕುಗಳ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು, ಉಡುಪಿ ಬೀಡಿ ಸಂಘದ ಮುಖಂಡರಾದ ಉಮೇಶ್ ಕುಂದರ್, ನಳಿನಿ ಎಸ್., ಗಿರಿಜಾ, ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಶೇಖರ್ ಬಂಗೇರ, ವಾಮನ ಪೂಜಾರಿ, ಸುಭಾಷ್ ನಾಯಕ್, ರಾಮ ಕಾರ್ಕಡ, ಸರೋಜ. ಎಸ್., ಶೇಖರ್ ಪಡುಬಿದ್ರಿ, ಸೈಯದ್ ಅಲಿ, ರಮೇಶ್ ಉಡುಪಿ, ಸಂಜೀವ ನಾಯಕ್ ಉಪಸ್ಥಿತರಿದ್ದರು.

ಜೆಸಿಟಿಯು ಉಡುಪಿ ಜಿಲ್ಲಾ ಸಂಚಾಲಕ ಕವಿರಾಜ್ ಎಸ್.ಕಾಂಚನ್ ಪ್ರಾಸ್ತಾವಿಕ ಮಾತಾನಾಡಿದರು. ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಶಶಿಧರ್ ಗೊಲ್ಲ ವಂದಿಸಿದರು.