ಉಡುಪಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಮೇ 20 ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ.ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಐಟಿಯುರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಅವರು, ಉಡುಪಿ ಜಿಲ್ಲಾ ಸಮಿತಿ ವತಿಯಿಂದಲೂ ಮುಷ್ಕರವು ಉಡುಪಿ, ಕುಂದಾಪುರ, ಬೈಂದೂರಿನಲ್ಲಿ ನಡೆಯಲಿದೆ.
ಈ ಮುಷ್ಕರದಲ್ಲಿ ಬ್ಯಾಂಕ್, ಎಲ್ಐಸಿ, ಅಂಚೆ, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಲಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ಉಡುಪಿಯ ಹಳೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಮೆರವಣಿಗೆ ಆರಂಭಗೊಂಡು, ಅಜ್ಜರಕಾಡು ಹುತಾತ್ಮ ಸ್ಮಾರಕದ ಮುಂಭಾಗ ಕೊನೆಗೊಳ್ಳಲಿದೆ. ನಂತರ ಸಭೆ ನಡೆಯಲಿದೆ. ಹಾಗೆಯೇ ಕುಂದಾಪುರದಲ್ಲಿ ಶಾಸ್ತ್ರಿ ವೃತ್ತದಿಂದ ಆರಂಭಗೊಂಡು, ಬಸ್ ನಿಲ್ದಾಣವರೆಗೆ ಸಾಗಿ, ಶಾಸ್ತ್ರಿ ಸರ್ಕಲ್ ಗೆ ವಾಪಾಸಾಗಿ ಸಭೆ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಮೇ.17 ರಂದು ಉಡುಪಿ, ಕುಂದಾಪುರ, ಬೈಂದೂರು ಭಾಗಗಳಲ್ಲಿ ಪಾದಯಾತ್ರೆಯ ಮೂಲಕ ಕರಪತ್ರವನ್ನು ಹಂಚಲಿದ್ದೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಮಿತಿಯ ಪ್ರ.ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಜಿಲ್ಲಾ ಸಮಿತಿ ಕಾರ್ಯದರ್ಶಿಗಳಾದ ಶೇಖರ್ ಬಂಗೇರಾ, ಕವಿರಾಜ್.ಎಸ್.ಕೋಟ್ಯಾನ್ ಉಪಸ್ಥಿತರಿದ್ದರು.












