ಉಡುಪಿ: ನೆಹರು ಸ್ಪೋರ್ಟ್ಸ್ ಆ್ಯಂಡ್ ಅಸೋಸಿಯೇಶನ್ ಅಲೆವೂರು ಇದರ 35ನೇ ವಾರ್ಷಿಕೋತ್ಸವ ಸಮಾರಂಭವು ಅಲೆವೂರು ನೆಹರು ಕ್ರೀಡಾಂಗಣದಲ್ಲಿ ಜರುಗಿತು.
ಪತ್ರಕರ್ತೆ ಸುರಯ್ಯ ಅಂಜುಂ ಮಾತನಾಡಿ, ರಾಜಕೀಯವಾಗಿ ಚಾಚಾ ನೆಹರು ಅವರನ್ನು ತಿರುಚುವ ಕೆಲಸಗಳು ಆದರೂ ಕೂಡ ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಒಂದು ಸಂಘವನ್ನು ಕೇವಲ ಒಂದು ವ್ಯಕ್ತಿಯಿಂದ ಬೆಳೆಸಲು ಸಾಧ್ಯವಿಲ್ಲ. ಹತ್ತು ಕೈಗಳು ಸೇರಿದಾಗ ಮಾತ್ರ ಇಂತಹ ಸುಂದರ ಸಂಸ್ಥೆಗಳು ಬೆಳೆಯಲು ಸಾಧ್ಯ. ಈ ವೇದಿಕೆಯಲ್ಲಿ ಮಹಿಳೆಯರಿಗೆ ಗೌರವ, ಸ್ಥಾನಮಾನ ಸಿಗುತ್ತಿದೆ ಎಂದರೆ ಅದು ಈ ಸಂಘದ ಆದರ್ಶದ ದಾರಿ. ಮ್ಕಕಳು ಬೆಳೆಯುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಲೆವೂರು ಕೊರಂಗ್ರಪಾಡಿ ಕೋ. ಆಪರೇಟಿವ್ ಅಗ್ರಿಕಲ್ಚರಲ್ ಸೊಸೈಟಿ ಉಪಾಧ್ಯಕ್ಷರಾದ ದಿನೇಶ್ ಕಿಣಿ ಹಾಗೂ ಉಡುಪಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರಾದ ಶಬರೀಶ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಹರು ಸ್ಪೋರ್ಟ್ಸ್ ಆ್ಯಂಡ್ ಅಸೋಸಿಯೇಶನ್ ಅಧ್ಯಕ್ಷರಾದ ದಯಾನಂದ ಅಂಚನ್ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ ಹೇರೂರು, ಅಲೆವೂರು ಮತ್ತು ಬೆಳಪು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಪ್ರವೀಣ್ ಡಿಸೋಜ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಉಪಸ್ಥಿತರಿದ್ದರು. ಅಲೆವೂರು ಹರೀಶ ಕಿಣಿ ಸ್ವಾಗತಿಸಿದರು. ಗುರುರಾಜ್ ಸಾಮಗ ವರದಿ ವಾಚಿಸಿದರು.












