ಉಡುಪಿ: ಕನ್ನಡದ ಹಿರಿಯ ಕಾದಂಬರಿಕಾರ್ತಿ, ಸಾಹಿತಿ, ರಂಗ ಕರ್ಮಿ ಹಾಗೂ ವಿಮರ್ಶಕಿ ವೈ.ಕೆ. ಸಂಧ್ಯಾ ಶರ್ಮ ಅವರನ್ನು 2025ನೇ ಸಾಲಿನ ಹಿರಿಯ ಪತ್ರಕರ್ತ, ವಿಮರ್ಶಕ ದಿ.ಈಶ್ವರಯ್ಯ ಅನಂತಪುರ ಹೆಸರಿನಲ್ಲಿ ನೀಡುವ ‘ಕಲಾ ಪ್ರವೀಣ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಮುಖ ಹೆಸರಾದ ಸಂಧ್ಯಾಶರ್ಮ ಅವರು ಖ್ಯಾತ ಲೇಖಕಿಯಾಗಿರುವ ಜೊತೆಗೆ ಅಂಕಣ ಬರಹಗಾರ್ತಿ, ನೃತ್ಯ ನಾಟಕ ಗಳ ವಿಮರ್ಶಕಿ ಕೂಡ ಆಗಿದ್ದಾರೆ. ಕೂಚುಪುಡಿ ನೃತ್ಯ ಕಲಾವಿದೆಯಾಗಿರುವ ಇವರು ಸಂಗೀತ ವಿಮರ್ಶೆಯಲ್ಲೂ ಪಳಗಿದವರು. ಹಲವು ಪತ್ರಿಕೆಗಳಲ್ಲಿ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ.ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರು, ಕಳೆದ 55 ವರ್ಷಗಳಿಂದ ಸಾಹಿತ್ಯ ಕೃಷಿ ನಡೆಸುತಿದ್ದು, 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನದಲ್ಲೂ ಮಾನ್ಯತೆ ಪಡೆದ ಕಲಾವಿದೆ ಇವರು.
ಕಳೆದ 48 ವರ್ಷಗಳಿಂದ ತಮ್ಮದೇ ಆದ ‘ಸಂಧ್ಯಾ ಕಲಾವಿದರು’ ಎಂಬ ಹವ್ಯಾಸಿ ನಾಟಕ ತಂಡವನ್ನು ಸ್ಥಾಪಿಸಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ‘ಸಂಧ್ಯಾ ಪತ್ರಿಕೆ’ ಎಂಬ ಸಾಂಸ್ಕೃತಿಕ ಅಂತರ್ಜಾಲ ಪತ್ರಿಕೆಯನ್ನೂ ಹುಟ್ಟು ಹಾಕಿ ಮುನ್ನಡೆಸುತ್ತಿದ್ದಾರೆ.
‘ಕಲಾವಿಹಾರಿ’ ಎ.ಈಶ್ವರಯ್ಯ ಹೆಸರನಲ್ಲಿ ಅವರ ಕುಟುಂಬ, ರಾಗ-ಧನ ಉಡುಪಿ ಸಂಸ್ಥೆಯ ಮೂಲಕ ಪ್ರತಿವರ್ಷ ನೀಡುವ ‘ಕಲಾಪ್ರವೀಣ’ ಪ್ರಶಸ್ತಿಗೆ ವೈ.ಕೆ.ಸಂಧ್ಯಾ ಶರ್ಮ ಆಯ್ಕೆಯಾಗಿರುತ್ತಾರೆ ಎಂದು ಈಶ್ವರಯ್ಯ ಅನಂತಪುರ ಅವರ ಸಹೋದರ ಕೃಷ್ಣಯ್ಯ ಅನಂತಪುರ ತಿಳಿಸಿದ್ದಾರೆ.












