ಉಡುಪಿ: ಗುಜರಿ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಲಾರಿಯಲ್ಲಿದ್ದ ಕಾರ್ಮಿಕರು ಸಹಿತ ಆರು ಮಂದಿ ಗಾಯಗೊಂಡ ಘಟನೆ ಭಾನುವಾರ ಉಡುಪಿ ಅಂಬಾಗಿಲು ಬಳಿಯ ರಾ.ಹೆ.66ರಲ್ಲಿ ಸಂಭವಿಸಿದೆ.

ಮಾಹಿತಿ ಪಡೆದ ಸಮಾಜ ಸೇವಕ ವಿಶು ಶೆಟ್ಟಿ ಅವರು ತತ್ಕ್ಷಣ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಲಾರಿ ಚಾಲಕ, ನಾಲ್ಕು ಮಂದಿ ಕಾರ್ಮಿಕರು ಹಾಗೂ ಬೈಕ್ ಸವಾರನನ್ನು ತಮ್ಮ ವಾಹನದಲ್ಲಿಯೇ ಕರೆದೊಯ್ದು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ದುರ್ಘಟನೆ ಸಂಭವಿಸುವ ಮುಂಚೆ ಅದೇ ಸ್ಥಳದಲ್ಲಿ ಬೈಕ್ ಸವಾರನೊಬ್ಬ ತನ್ನ ಬೈಕ್ ನಿಲ್ಲಿಸಿ ಪಕ್ಕದಲ್ಲಿ ನಿಂತಿದ್ದು, ಸ್ವಲ್ಪದರಲ್ಲಿಯೇ ಅಪಾಯದಿಂದ ಪಾರಾಗಿದ್ದಾನೆ. ಆದರೆ ಈತನ ಬೈಕ್ ಮಾತ್ರ ಲಾರಿಯ ಅಡಿಗೆ ಬಿದ್ದು ನಜ್ಜುಗುಜ್ಜಾಗಿದೆ. ಸಂಚಾರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.












