ಉಡುಪಿ ವಕೀಲರ ಸಂಘ: ರಾಜ್ಯಮಟ್ಟ ಕ್ರೀಡಾಕೂಟದ ಟ್ರೋಫಿ ಅನಾವರಣ

ಉಡುಪಿ: ಉಡುಪಿ ವಕೀಲರ ಸಂಘ ಮತ್ತು ನ್ಯಾಯಾಲಯದ 125 ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವದ ಮುಂದುವರಿದ ಭಾಗವಾಗಿ ಎಮ್‌ಜಿ‌ಎಮ್ ಮೈದಾನದಲ್ಲಿ ಮಾ.1 ಮತ್ತು 2ರಂದು ಆಯೋಜಿಸಿರುವ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರೀಡಾಕೂಟದ ಟ್ರೋಫಿಯನ್ನು ಸೋಮವಾರ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಕಿರಣ್ ಎಸ್. ಗಂಗಣ್ಣನವರ್ ಅನಾವರಣಗೊಳಿಸಿದರು.

ಆ ಬಳಿಕ ಮಾತನಾಡಿದ ಅವರು, ಪ್ರತಿಭೆಗಳ ಅನಾವರಣಕ್ಕೆ ಕ್ರೀಡಾಕೂಟ ಸಹಕಾರಿ. ಉಡುಪಿ ವಕೀಲರ ಸಂಘದ ಚಟುವಟಿಕೆಗಳಿಗೆ ಉತ್ತಮ ಪ್ರೋತ್ಸಾಹ ದೊರಕಿದೆ. ಸಮಾಜಮುಖಿ ಕಾರ್ಯದಲ್ಲಿ ಮುಂದಿರುವ ಉಡುಪಿ ವಕೀಲರ ಸಂಘದ ರಾಜ್ಯಮಟ್ಟದ ಕ್ರೀಡಾಕೂಟವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಮಾತನಾಡಿ, ಹೊನಲು ಬೆಳಕಿನ ಕ್ರೀಡಾಕೂಟದಲ್ಲಿ 39 ಕ್ರಿಕೆಟ್, 16 ವಾಲಿಬಾಲ್ (ಪುರುಷರ), 10 ತ್ರೋಬಾಲ್ (ಮಹಿಳೆಯರ), 28 ಶಟಲ್ ಬ್ಯಾಡ್ಮಿಂಟನ್ (ಪುರುಷ-ಮಹಿಳೆಯರ) ತಂಡಗಳು ಭಾಗವಹಿಸಲಿವೆ ಎಂದರು.

Oplus_131072

ಪಂದ್ಯಾಕೂಟವನ್ನು ಮಾ.1 ರ ಸಂಜೆ 4 ಗಂಟೆಗೆ
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಾಧ್ಯಕ್ಷ ಹಾಗೂ ಹೈಕೋರ್ಟ್ ನ್ಯಾಯಾಧೀಶ ಕಾಮೇಶ್ವರ್ ರಾವ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ವಹಿಸಲಿದ್ದಾರೆ. ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶ ರಾಜೇಶ್ ರೈ ಕೆ, ಮಾಹೆ ಸಹ ಕುಲಾಧಿಪತಿ ಡಾ.ಎಚ್. ಎಸ್. ಬಲ್ಲಾಳ್ ಹಾಗೂ ಎಂಆರ್‌ಜಿ ಗ್ರೂಪಿನ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ, ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ಭಾಗವಹಿಸಲಿದ್ದಾರೆ.

ಮಾ. 2ರ ಸಂಜೆ 7 ಗಂಟೆಗೆ ನಡೆಯುವ ಸಮಾರೋಪ ಮತ್ತು ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸಮಾರೋಪ ಭಾಷಣ ಮಾಡಲಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‍ನ ಸದಸ್ಯ ಪಿ.ಪಿ. ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಶಾಸಕ ರಘುಪತಿ ಭಟ್ ಭಾಗವಹಿಸಲಿದ್ದಾರೆ ಎಂದರು.

ವೇದಿಕೆಯಲ್ಲಿ ಜಿಲ್ಲಾ ಪೋಕ್ಸೊ ನ್ಯಾಯಾಲಯ ನ್ಯಾಯಧೀಶ ಶ್ರೀನಿವಾಸ್ ಸುವರ್ಣ, ಸಿಜೆಎಮ್ ಪುರುಷೋತ್ತಮ್.ಎಮ್, ವಕೀಲರ ಸಂಘದ ಉಪಾಧ್ಯಕ್ಷ ಮಿತ್ರಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಜೇಶ ಎ.ಆರ್., ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಕುಮಾರ್ ಮೂಡುಬೆಳ್ಳೆ, ಖಜಾಂಚಿ ಗಂಗಾಧರ ಎಚ್.ಎಮ್., ಜಂಟಿ ಕಾರ್ಯದರ್ಶಿ ರವೀಂದ್ರ ಬೈಲೂರು, ವಿವಿಧ ಉಪಸಮಿತಿಗಳ ಸಂಚಾಲಕರಾದ ಎಮ್. ಶಾಂತಾರಾಮ್ ಶೆಟ್ಟಿ, ದಿವಾಕರ್ ಎಮ್ ಶೆಟ್ಟಿ, ಬಿ. ನಾಗರಾಜ್, ಪ್ರವೀಣ್ ಎಮ್ ಪೂಜಾರಿ, ಆರೂರು ಸುಕೇಶ್ ಶೆಟ್ಟಿ, ಗಣೇಶ್ ಕುಮಾರ್ ಮಟ್ಟು, ಪಂದ್ಯಾಟದ ಉಸ್ತುವಾರಿಗಳಾದ ಸಚಿನ್ ಕುಮಾರ್ ಶೆಟ್ಟಿ, ಗಂಗಾಧರ ಶೇರಿಗಾರ್, ಯೋಗಿಶ್ ಕುಮಾರ್ ಸಾಲಿಗ್ರಾಮ, ಸ್ಯಾಂಡ್ರಾ ಆ್ಯನ್ಸಿಲ್ಲಾ ಡಿಸೋಜಾ, ನ್ಯಾಯವಾದಿಗಳಾದ ಶಶಿರಾಜ್ ಪೈಯ್ಯಾರು, ಶಿವಾನಂದ್ ಪಾಂಗಾಳ, ಜಯಂತ್ ರಾವ್, ಸಂದೀಪ್ ಶೆಟ್ಟಿ ಉಪಸ್ಥಿತರಿದ್ದರು.