ಉಡುಪಿ: ಭೂತಾರಾಧನೆಯ ಒಳಗೆ ಕಲೆ ಇದೆ. ಅದನ್ನು ಹೆಕ್ಕಿ ತೆಗೆದು ರಂಗಕ್ಕೆ ತರುವ ಕೆಲಸ ಆಗಬೇಕು ಎಂದು ಸಾಹಿತಿ ಅರವಿಂದ ಮಾಲಗತ್ತಿ ತಿಳಿಸಿದರು.
ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ವತಿಯಿಂದ ಅಜ್ಜರಕಾಡು ಭುಜಂಗ ಪಾರ್ಕ್ನಲ್ಲಿ ಹಮ್ಮಿಕೊಳ್ಳಲಾದ 13ನೇ ವರ್ಷದ ರಂಗಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಮೃತ ಸೋಮೇಶ್ವರ ಭೂತಾರಾಧನೆಯ ಪಾಡ್ದನಗಳನ್ನು ಇಟ್ಟುಕೊಂಡು ರಂಗಪ್ರಯೋಗ ನಡೆಸಿದ್ದರು. ಅಂಥ ಪ್ರಯೋಗ ಗಳನ್ನು ಆಧುನಿಕ ರಂಗಭೂಮಿ ಯಲ್ಲಿ ಹೆಚ್ಚಿಗೆ ಆಗಿಲ್ಲ. ಇದು ಜೇನುಗೂಡಿಗೆ ಕೈ ಹಾಕುವ ಕೆಲಸ. ಏನೋ ಮಾಡಲು ಹೋಗಿ ಏನೋ ಆಗುವ ಕಾರ್ಯ. ಸಂಪ್ರದಾಯಸ್ಥರು ಕೂಡ ಇದಕ್ಕೆ ಪ್ರೋತ್ಸಾಹ ನೀಡಬೇಕು. ಆಗ ಭೂತಾರಾಧನೆ ನಮ್ಮ ನಾಡಿನ, ನಮ್ಮ ದೇಶದ ಗಡಿ ದಾಟಿ ಬೆಳೆಯಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ’ಪ್ರತಿವಾರ ಕಾರ್ಯಕ್ರಮಗಳಾಗಬೇಕು ಎಂಬ ಕನಸು ಹೊತ್ತು ವಿ.ಎಸ್.ಆಚಾರ್ಯ ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರ ಕಟ್ಟಿದ್ದರು. ಆದರೆ, ಸುಮನಸಾ ಮಾತ್ರ ವರ್ಷಕ್ಕೊಮ್ಮೆ ಬಳಸಿಕೊಳ್ಳುತ್ತಿದ್ದಾರೆ. ಉಳಿದವರು ಬಳಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಲಾವಿದ ಗೀತಂ ಗಿರೀಶ್ ಅವರಿಗೆ ರಂಗಸನ್ಮಾನ ನೀಡಿ ಗೌರವಿಸಲಾಯಿತು. ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉದ್ಯಮಿ ದಿವಾಕರ ಸಾಲ್ಯಾನ್, ಕೊಡಂಕೂರು ಸಾಯಿ ಬಾಬಾ ಮಂದಿರದ ಧರ್ಮದರ್ಶಿ ತೋಟದಮನೆ ದಿವಾಕರ ಶೆಟ್ಟಿ, ಸುಮನಸಾ ಕೊಡವೂರು ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು.













