ಉಡುಪಿ: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗ, ಕಾಕುಂಜೆ ಸಾಫ್ಟ್ವೇರ್, ಮಂಗಳೂರು ಮತ್ತು ಕಾಲೇಜಿನ ಐಎಸ್ಟಿಇ ಘಟಕ, ಐಇಇಇ ಘಟಕ ಇವರ
ಸಹಯೋಗದೊಂದಿಗೆ “ಮಾಸ್ಟರಿಂಗ್ ಪೈಥಾನ್: ಉದಯೋನ್ಮುಖ ಪ್ರವೃತ್ತಿಗಳು ಮತ್ತು ಆವಿಷ್ಕಾರಗಳು” ಎಂಬ ಶೀರ್ಷಿಕೆಯೊಂದಿಗೆ ಐದು ದಿನಗಳ ಅಧ್ಯಾಪಕರ ಅಭಿವೃದ್ದಿ ಕಾರ್ಯಾಗಾರವನ್ನು ಫೆಬ್ರವರಿ 3 ರಿಂದ
7ರವರೆಗೆ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ಫೆಬ್ರವರಿ 3ರಂದು ನಡೆಯಿತು. ಕಾಕುಂಜೆ ಸಾಫ್ಟ್ವೇರ್ ಇದರ ನಿರ್ದೇಶಕರಾದ ಶ್ರೀ ಜಿ ಕೆ ಭಟ್ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇವರು ಪೈಥಾನ್ ಪ್ರೋಗ್ರಾಮಿಂಗ್ ಕುರಿತ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅಧ್ಯಾಪಕರಿಗೆ ಪೈಥಾನ ಪ್ರೋಗ್ರಾಮಿಂಗ್ ಮತ್ತು ಅದರ ಯಾಂತ್ರಿಕ ಕಲಿಕೆ, ಡಾಟಾ ವಿಶ್ಲೇಷಣೆ
ಮತ್ತು ಕೃತಕ ಬುದ್ದಿಮತ್ತೆ ಸೇರಿದಂತೆ ವಿವಿಧ ತಂತ್ರಜ್ಞಾನ
ಕ್ಷೇತ್ರಗಳಲ್ಲಿ ಅದರ ಅನ್ವಯಗಳ ಬಗ್ಗೆ ಆಳವಾದ ಜ್ಞಾನ ಮತ್ತು
ಕೌಶಲ್ಯವನ್ನು ಬೆಳೆಸಲು ಸಹಾಯವಾಗುತ್ತದೆ ಎಂದರು.
ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳಾಗಿ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಇದರ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಇವರು ಅಧ್ಯಾಪಕರು
ಇಂತಹ ಅಭಿವೃದ್ದಿ ಕಾರ್ಯಾಗಾರದಲ್ಲಿ ಭಾಗವಹಿಸುವುದರ
ಪ್ರಯೋಜನವನ್ನು ಒತ್ತಿ ಹೇಳಿದರು.ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನೂತನ ತಂತ್ರಜ್ಞಾನಗಳ
ಕುರಿತು ಮಾಹಿತಿ ಪಡೆದು, ಕೌಶಲ್ಯ ಮತ್ತು ಜ್ಞಾನಾಭಿವೃದ್ದಿಗೊಳಿಸುವ ಮೂಲಕ ಕಾರ್ಯಾಗಾರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಅಧ್ಯಾಪಕರನ್ನು ಪ್ರೇರೆಪಿಸಿದರು.

ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾದ ಶ್ರೀ ಅರುಣ್ ಉಪಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಸಚಿನ್ ಪ್ರಭು ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ಡಾ. ಶಿಲ್ಪಾ ಕಾಮತ್ ಅವರ ವಂದನಾರ್ಪಣೆಯೊಂದಿಗೆ ಕೊನೆಗೊಂಡಿತು. ಶ್ರೀಮತಿ
ಅಕ್ಷತಾ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.












