ಕರಾವಳಿ ಭಾಗದ ಬ್ಯಾಂಕುಗಳು ವಿಲೀನಕ್ಕೆ ಮುಂದಾದರೆ ಹೋರಾಟ: ಪ್ರಖ್ಯಾತ್ ಶೆಟ್ಟಿ 

ಉಡುಪಿ: ಕರಾವಳಿ ಭಾಗದಲ್ಲಿ ಹುಟ್ಟಿ ಬೆಳೆದ ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಒಳಪಡಿಸಲಿರುವ ಕೇಂದ್ರ ಕ್ರಮವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಖಂಡಿಸಿದ್ದು, ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಆರ್ಥಿಕ ಅಜ್ಞಾನದಿಂದ ದೇಶದ ಬ್ಯಾಂಕಿಂಗ್ ವಲಯ ದಿವಾಳಿಯತ್ತ ಸಾಗುತ್ತಿದೆ. ಹೀಗಾಗಿ‌ ಹಲವಾರು ಬ್ಯಾಂಕುಗಳು ನಷ್ಟದತ್ತ ಸಾಗುತಿವೆ. ಕರಾವಳಿ ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರದ ತೊಟ್ಟಿಲಾಗಿದ್ದು, ದೇಶಕ್ಕೆ ಬ್ಯಾಂಕಿಂಗ್ ಕ್ಷೇತ್ರದ ಪರಿಚಯಿಸಿದ ಕೀರ್ತಿ ಕರಾವಳಿ ಜಿಲ್ಲೆಗಿದೆ. ಕಳೆದ ಬಾರಿ ಮೋದಿ ಸರಕಾರ ಲಾಭದಲ್ಲಿದ್ದ ವಿಜಯ ಬ್ಯಾಂಕನ್ನು ನಷ್ಟದಲ್ಲಿದ್ದ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಿದಾಗಲೂ ಕೂಡ ವಿರೋಧವನ್ನು ವ್ಯಕ್ತಪಡಿಸಲಾಗಿದೆ. ಅಲ್ಲದೇ ಉಳಿದ ಬ್ಯಾಂಕುಗಳ ವಿಲೀನದ ಕುರಿತು ಎಚ್ಚರಿಕೆ ನೀಡಿದ್ದು, ಅದೀಗ  ಸತ್ಯವಾಗುತ್ತಿದೆ.
ಕರಾವಳಿಯ ಕಾರ್ಪೊರೇಶನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕುಗಳನ್ನು ವಿಲೀನ ಮಾಡಿ ಮತ್ತೊಮ್ಮೆ ಕರಾವಳಿಗರಿಗೆ ದ್ರೋಹವೆಸಗುವ ಕೆಲಸ ಕೆಂದ್ರ ಸರಕಾರ ಮಾಡಿದ್ದು ಖಂಡನೀಯ. ಇನ್ನಾದರೂ ಕೇಂದ್ರ ಸರಕಾರ ಎಚ್ಚೆತ್ತು ಕರಾವಳಿಯ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ಕೈಬಿಡಬೇಕು. ಕರಾವಳಿಯ ಎರಡು ಜಿಲ್ಲೆಗಳಿಂದ ಆಯ್ಕೆಯಾದ ಬಿಜೆಪಿ ಸಂಸದರು ಮತ್ತು ಶಾಸಕರು ಈ ಬಗ್ಗೆ ಮೌನ ಮುರಿದು ಇಲ್ಲಿನ ಬ್ಯಾಂಕುಗಳನ್ನು ಉಳಿಸುವತ್ತ ಗಮನ ಹರಿಸಬೇಕು. ತಪ್ಪಿದರೆ ಉಗ್ರ ಹೋರಾಟ ನಡೆಸಲಾಗಿವುದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.