ಉಡುಪಿ: “ಬೃಂದಾವನದಿಂದ ಉಡುಪಿಯೆಡೆಗೆ” ಕಲಾಕೃತಿಗಳ ಕಲಾ ಪ್ರದರ್ಶನ

ಉಡುಪಿ: ಭಾವನಾ ಪೌಂಡೇಶನ್(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ, ಉಡುಪಿಯ ಮಧುರಂ ವೈಟ್ ಲೋಟಸ್ ಹೋಟೇಲ್‌ನ ಸಹಯೋಗದಲ್ಲಿ “ಬೃಂದಾವನದಿ೦ದ ಉಡುಪಿಯೆಡೆಗೆ” ಶೀರ್ಷಿಕೆಯಡಿಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರೀರಾಮ ಸೋನಿಯವರ ಮಥುರಾದ ಸಾಂಝಿ ಪೇಪರ್ ಕಲಾಕೃತಿಗಳ ಕಲಾ ಪ್ರದರ್ಶನವನ್ನು ಹತ್ತು ಮೂರು ಇಪ್ಪತ್ತೆಂಟು, ಬಡಗುಪೇಟೆಯ ಗ್ಯಾಲರಿಯಲ್ಲಿ ಆಯೋಜಿಸುತ್ತಿದೆ.

ದಿನಾಂಕ 22ನೇ ಬುಧವಾರ ಸಂಜೆ 4.30ಕ್ಕೆ ಉಡುಪಿಯ ಆರ್ಕಿಟೆಕ್ಟ್ ಶ್ರೀಜಾ ಜಯಕುಮಾರ್ ಕಲಾಪ್ರದರ್ಶನವನ್ನು ಉದ್ಘಾಟಿಸಲಿದ್ದು, ಫೌಂಡೇಶನ್‌ನ ನಿರ್ದೇಶಕರಾದ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿರುತ್ತಾರೆ. ಭಾರತೀಯ ದೇಶೀಯ ಕಲೆಯಾದ ಮಥುರಾದ ಸಾಂಝಿ ಕಲೆಯು ಪೇಪರ್ ಕಟ್ಟಿಂಗ್ ಕಲೆಯಾಗಿದ್ದು, ಟ್ರೀ ಆಫ್ ಲೈಫ್, ಕೃಷ್ಣನ ಲೀಲೆಗಳು, ಬುದ್ಧ, ನಿಸರ್ಗ ಚಿತ್ರಗಳಿಗೆ ಪ್ರಸಿದ್ಧಿಯನ್ನು ಪಡೆದಿವೆಯಲ್ಲದೇ ಇಂದಿಗೆ ಒಳಾಂಗಣ ವಿನ್ಯಾಸದಲ್ಲಿ ಬಹು ಮಹತ್ವಪೂರ್ಣ ಸ್ಥಾನವನ್ನು ಅಲಂಕರಿಸಿದೆ.

ಈ ಕಲಾಪ್ರದರ್ಶನವು 22 ರಿಂದ 26ನೇ ಜನವರಿ ತನಕ ನಡೆಯಲಿದ್ದು, ಅಪರಾಹ್ನ 3ರಿಂದ 7ರ ತನಕ ಕಲಾಸಕ್ತರ ವೀಕ್ಷಣೆಗೆ ತೆರೆದಿರಲಿದೆ.

ಅಂತೆಯೇ ಇದರ ಜೊತೆಗೇ ಜನಪದ ಸರಣಿ ಕಲಾ ಕಾರ್ಯಾಗಾರದ ಹದಿನಾರನೇ ಆವೃತ್ತಿಯು 25ನೇ ಜನವರಿ ಶನಿವಾರದಂದು ಬೆಳಿಗ್ಗೆ 9.30ಕ್ಕೆ ವೈಟ್ ಲೋಟಸ್ ಹೋಟೆಲ್‌ನ ಆಡಳಿತ ನಿರ್ದೇಶಕರಾದ ಅಜಯ್ ಪಿ. ಶೆಟ್ಟಿಯವರು ಉದ್ಘಾಟನೆ ಮಾಡಲಿದ್ದಾರೆ.

ಭಾವನಾ ಪ್ರತಿಷ್ಠಾನದ ಸಂಸ್ಥಾಪಕ ಸದಸ್ಯೆ ವಿದುಷಿ ಅಕ್ಷತಾ ವಿಶುರಾವ್ ಉಪಸ್ಥಿತರಿರಲಿದ್ದಾರೆ. ಈ ಸರಣಿ ಕಲಾ ಕಾರ್ಯಾಗಾರದ ಭಾಗವಾಗಿ ಸಾಂಝಿ ಕಲೆ ಹಾಗೂ ನೀರಿನ ಮೇಲೆ ರಂಗೋಲಿಯನ್ನು ಹಾಕಿ ಕೃಷ್ಣನನ್ನು ಆರಾಧಿಸುವ ಜಲ ಸಾಂಝಿ ಕಲೆಯನ್ನು ಈ ಬಾರಿ ಪರಿಚಯಿಸುತ್ತಿದ್ದು, ಮಥುರಾದ ಶ್ರೀರಾಮ ಸೋನಿಯವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ.

25ನೇ ಶನಿವಾರ ಸಾಂಝಿ ಮತ್ತು 26ನೇ ಭಾನುವಾರ ಜಲ ಸಾಂಝಿ ಕಾರ್ಯಾಗಾರಗಳು ಬಡಗುಪೇಟೆಯ ಗ್ಯಾಲರಿಯಲ್ಲಿ ನಡೆಯಲಿದೆ. ಕಲಿಕಾಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ (9845650544) ಅವರನ್ನು ಸಂಪರ್ಕಿಸಬಹುದು.