ಟಿಬೆಟ್ ಧರ್ಮಗುರು ದಲಾಯಿಲಾಮ ಮಂಗಳೂರಿಗೆ ಆಗಮನ

ಮಂಗಳೂರು: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲಾಯಿಲಾಮ ಅವರು ಗುರುವಾರ ಮಂಗಳೂರಿಗೆ ಆಗಮಿಸಿದರು.
ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಮಂಗಳೂರು ಉಪವಿಭಾಗಾಧಿಕಾರಿ ರವಿ ಚಂದ್ರ ನಾಯ್ಕ್, ಉಪ ಪೊಲೀಸ್ ಆಯುಕ್ತರಾದ ಅರುಣಾಂಶು ಗಿರಿ, ಲಕ್ಷ್ಮೀ ಗಣೇಶ್ ಅವರು ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಿದರು.
ವಿಮಾನ ನಿಲ್ದಾಣದ ಹೊರಗಡೆ ಟಿಬೆಟಿಯನ್ ಸಾಂಪ್ರದಾಯಿಕ ನೃತ್ಯದ ಮೂಲಕವೂ ಅವರನ್ನು ಸ್ವಾಗತಿಸಲಾಯಿತು‌.
ದಲಾಯಿಲಾಮ ಆಗಮನದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ  ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರದ ಖಾಸಗಿ ಹೋಟೆಲ್ ನಲ್ಲಿ ತಂಗಿರುವ ಅವರನ್ನು ಭಾರೀ ಭದ್ರತೆ ಯಲ್ಲಿ ಝೀರೋ ಟ್ರಾಫಿಕ್ ನಲ್ಲಿ ವಿಮಾನ ನಿಲ್ದಾಣದಿಂದ ನಗರಕ್ಕೆ ಕರೆ ತರಲಾಯಿತು‌.
ಮೂರು ದಿನಗಳ ಕಾಲ ಮಂಗಳೂರು  ನಗರದಲ್ಲಿ ಇರಲಿದ್ದು, ದಲಾಯಿಲಾಮ ಅವರು  ಆ. 30 ರಂದು ನಗರದ ಫಾದರ್ ಮುಲ್ಲರ್ ಸಭಾಂಗಣದಲ್ಲಿ ನಡೆಯುವ ನಯನ ಅಖಿಲ ಭಾರತ ಕ್ಯಾಥೊಲಿಕ್ ಶಾಲಾ ಒಕ್ಕೂಟದ ರಾಷ್ಟ್ರೀಯ ಸಮಾವೇಶದಲ್ಲಿ   ಭಾಗವಹಿಸುವರು. ಆ.31 ರಂದು  ಅವರು ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ.