ಉಡುಪಿ: ಉಡುಪಿ ಗುಂಡಿಬೈಲು ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿಗಳ ಗುರುವಂದನಾ ಸಮಿತಿಯ ವತಿಯಿಂದ “ಗುರುವಂದನಾ ಕಾರ್ಯಕ್ರಮ” ಜ. 26ರಂದು ದೊಡ್ಡಣಗುಡ್ಡೆಯ ಸರಕಾರಿ ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನವೀನ್ ರಾವ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 4 ರಿಂದ 5 ರವರೆಗೆ ಹಳೆ ವಿದ್ಯಾರ್ಥಿ ಹಾಗೂ ಗುರುಗಳ ಕುಶಲೋಪರಿ ಮಾತುಕತೆ ನಡೆಯಲಿದೆ. ಸಂಜೆ 6 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, 27 ನಿವೃತ್ತ ಶಿಕ್ಷಕರಿಗೆ ಗುರುವಂದನೆ ನಡೆಯಲಿದೆ ಎಂದರು.
ಸಮಿತಿಯ ಗೌರವಾಧ್ಯಕ್ಷ, ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥರು, ಸೋದೆ ಮಠದ ವಿಶ್ವವಲ್ಲಭತೀರ್ಥರು ಆರ್ಶೀವಚನ ನೀಡಲಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ರಾತ್ರಿ 8 ರಿಂದ 9 ರವರೆಗೆ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 9ರಿಂದ ಉಡುಪಿಯ ಶ್ರೀಕೃಷ್ಣ ಕಲಾವಿದರಿಂದ “ಆನಿದ ಮನದಾನಿ” ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಸಂತೋಷ್ ಪಾಲನ್, ಕೋಶಾಧಿಕಾರಿ ಗುರುಪ್ರಸಾದ್ ಶರ್ಮ, ಪ್ರಮುಖರಾದ ಮಮತಾ, ಮೊಹಮ್ಮದ್, ಶೆಹರಾಝ್, ಸೈಫುಲ್ಲಾ, ಸಂಶುದ್ದೀನ್ ಉಪಸ್ಥಿತರಿದ್ದರು.












