ಕುಬ್ಜಾ ನದಿಯಲ್ಲಿ ಮಕ್ಕಳನ್ನು ಸಾಯಿಸಿದ ಪ್ರಕರಣ:ತಾಯಿಗೆ ನಿರೀಕ್ಷಣಾ ಜಾಮೀನು

ಕುಂದಾಪುರ : ತಾಲ್ಲೂಕಿನ ಯಡಮೊಗೆ ಗ್ರಾಮದ ಕುಮ್ಟಿಬೇರು ಎಂಬಲ್ಲಿ ಜು.11 ರಂದು ಬೆಳಿಗ್ಗೆ 4.30 ರ ವೇಳೆಯಲ್ಲಿ ಮನೆಯ ಸಮೀಪದಲ್ಲಿ ಇರುವ ಕುಬ್ಜಾ ನದಿಯಲ್ಲಿ 1 ವರ್ಷ 3 ತಿಂಗಳ ಹೆಣ್ಣು ಮಗು ಸಾನ್ವಿಕಾಳನ್ನು ಕೊಂದು, 5 ವರ್ಷದ ಪ್ರಾಯದ ಪುತ್ರ ಸಾತ್ವಿಕನನ್ನು ಕೊಲ್ಲಲು ಯತ್ನಿಸಿದ ಆರೋಪಗಳನ್ನು ಎದುರಿಸುತ್ತಿದ್ದ ಮಕ್ಕಳಿಬ್ಬರ ತಾಯಿ ರೇಖಾ (32) ಎಂಬಾಕೆಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.

ಮನೆಯಲ್ಲಿ ಮಲಗಿದ್ದ ವೇಳೆ ನಸುಕಿನಲ್ಲಿ ಮನೆಗೆ ಬಂದ ಅಪರಿಚಿತ  ಅಪಹರಣಾಕಾರರು ಮಲಗಿದ್ದ ಮಗುವನ್ನು ಅಪಹರಿಸಿಕೊಂಡು ಹೋಗಿರುವುದಾಗಿ ಮೊದಲು ರೇಖಾ ಸುಳ್ಳು ದೂರನ್ನು ನೀಡಿದ್ದಳು. ಈ ಕಾರಣಕ್ಕಾಗಿ ಪ್ರಕರಣ ಜಿಲ್ಲಾದ್ಯಾಂತ ಸಂಚಲನ ಉಂಟು ಮಾಡಿತ್ತು. ವಾಟ್ಸ್‌ ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಘಟನೆಯ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದರು.

ಜು.12 ರಂದು ಕಾಣೆಯಾಗಿದ್ದ ಮಗು ಸಾನ್ವಿಕಾಳ ಮೃತ ದೇಹ ಹೊಸಂಗಡಿ ಗ್ರಾಮದ ಕಾರೂರು ಎಂಬಲ್ಲಿ ಕುಬ್ಜಾ ನದಿಯ ಮಧ್ಯದ ಗಿಡವೊಂದರಲ್ಲಿ ಪತ್ತೆಯಾಗಿತ್ತು. ಮಗುವಿನ ನಿಗೂಢ ನಾಪತ್ತೆಯ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದ ಜಿಲ್ಲಾ ಎಸ್‌.ಪಿ ನಿಶಾ ಜೇಮ್ಸ್‌ ಹಾಗೂ ಡಿವೈಎಸ್‌ಪಿ ಅವರಿಗೆ ಮಗುವಿನ ತಾಯಿ ಪದೆ ಪದೆ ತನ್ನ ಹೇಳಿಕೆ ಬದಲಾಯಿಸುತ್ತಿದುದರಿಂದ ಅನುಮಾನಗೊಂಡು ಬದುಕಿ ಉಳಿದಿದ್ದ ಪುತ್ರ ಸಾತ್ವಿಕನನ್ನು ಪ್ರಶ್ನಿಸಿ ಆತನಿಂದ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿದುಕೊಂಡು ರೇಖಾ ವಿರುದ್ದ ಐಪಿಸಿ ಕಲಂ 302, 307 ಹಾಗೂ 309 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಮಗುವನ್ನು ಅಪಹರಿಸಲಾಗಿದೆ ಎನ್ನುವ ದೂರನ್ನು ಪರಿವರ್ತಿಸಿ ಕೊಲೆ ಹಾಗೂ ಕೊಲೆ ಯತ್ನದ ಪ್ರಕರಣಗಳು ದಾಖಲಾದ ಬಳಿಕ ಆರೋಪಿ ಪೊಲೀಸರಿಗೆ ಲಭ್ಯವಾಗಿರಲಿಲ್ಲ. 1 ವರ್ಷ 3 ತಿಂಗಳು ಪ್ರಾಯದ ತನ್ನ ಮಗುವನ್ನೆ ಸಾಯಿಸಿದ್ದ ಹೆತ್ತಬ್ಬೆಯ ಕೃತ್ಯದ ಬಗ್ಗೆ ವ್ಯಾಪಕ ಖಂಡನೆ ಹಾಗೂ ಆಕ್ರೋಶ ವ್ಯಕ್ತವಾಗಿತ್ತು. ಆಕೆಯ ಪರವಾಗಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ಪ್ರಾಸಿಕ್ಯೂಶನ್‌ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿತ್ತು.

ಆರೋಪಿಯ ಪರವಾಗಿ ವಾದ ಮಂಡಿಸಿದ್ದ ನ್ಯಾಯವಾದಿ ರವಿಕಿರಣ್‌ ಮುರ್ಡೇಶ್ವರ ಅವರು, ಬಾಣಂತನವಾದ ಬಳಿಕ ಸ್ತ್ರೀಯರಲ್ಲಿ ಕಾಣಿಸುವ ಪು್ಯಪೇರಿಯಮ್‌( ಮಾನಸಿಕ ರೋಗ) ಕಾಯಿಲೆಯಿಂದಾಗಿ ಬಳಲುತ್ತಿದ್ದ ಆಕೆ ಈ ಕೃತ್ಯ ಮಾಡಿರುವುದಾಗಿ ವಾದಿಸಿದ್ದರು. ಎರಡು ಕಡೆಯ ವಾದವನ್ನು ಆಲಿಸಿದ ಉಡುಪಿಯ ಜಿಲ್ಲಾ ಸೆಷನ್ಸ್‌ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಂ.ಜೋಶಿಯವರು ಆರೋಪಿತಳಿಗೆ ಶರ್ತಬದ್ಧ ನಿರೀಕ್ಷಣಾ ಜಾಮೀನು ನೀಡಿದ್ದಾರೆ.