ಕಾರ್ಕಳ: ಕಾರ್ಕಳ ಎಂ. ಪಿ. ಎಂ ಸ್ಮಾರಕ ಸರಕಾರಿ ಪ್ರ.ದರ್ಜೆ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಧರ್ಮಸ್ಥಳ ರತ್ನವರ್ಮ ಹೆಗಡೆ ಮೆಮೆರಿಯಲ್ ಟ್ರೋಪಿ 2024-25 ನೇ ಸಾಲಿನ ಉಡುಪಿ ವಲಯದ ಪುರುಷರ ಕಬಡ್ಡಿ ಪಂದ್ಯಾವಳಿ ಡಿ. 04 ರಂದು ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಕಳ ಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಶ್ರೀವರ್ಮ ಅಜ್ರಿ ಅವರು ಮಾತನಾಡಿ, ಸರಕಾರಿ ಕಾಲೇಜುಗಳು ಖಾಸಗಿ ಕಾಲೇಜುಗಳಂತೆ ಸಶಕ್ತವಾಗಿ ಕ್ರೀಡಾಕೂಟ ನಡೆಸುವಲ್ಲಿ ಯಶಸ್ವಿಯಾಗಿದೆ. ಅನುಭವವೇ ಗೆಲುವು, ಕ್ರೀಡೆಯಿಂದ ಮನೋಲ್ಲಾಸ ದೈಹಿಕ ಸೃದೃಢತೆ ಸಾಧ್ಯ ಎಂದರು.
![](https://udupixpress.com/wp-content/uploads/2024/12/IMG-20241204-WA0004-1024x662.jpg)
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜಿರಾಲ್ಡ್ ಸಂತೋಷ್ ಡಿಸೋಜ ಅವರು ಮಾತನಾಡಿ ಗೆಲುವಿಗಾಗಿ ಮಾತ್ರವಲ್ಲದೆ ಸಂತೋಷಕ್ಕಾಗಿ ಕೂಡ ಕ್ರೀಡೆಯನ್ನು ಆಡಬೇಕು. ಇದರಿಂದ ದೈಹಿಕ ಚೈತನ್ಯ ಸಿಗುತ್ತದೆ. ವಿಶ್ವವಿದ್ಯಾನಿಲಯ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುತ್ತಲೇ ಬಂದಿದೆ.ಕಬಡ್ಡಿ ಕ್ರೀಡೆಗೂ ಪ್ರೋತ್ಸಾಹ ನೀಡುತ್ತಿದೆ ಎಂದರು.
ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರಾಜೇಶ್ ಆಚಾರ್ಯ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ್ ರೈ ಕೆ ಅವರು ಮಾತನಾಡಿ, ಸೋಲೇ ಗೆಲುವಿನ ಮೆಟ್ಟಿಲು. ಸೋಲಿಗಿಂತ ಅನುಭವ ದೊಡ್ಡದು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾ ನಿರೀಕ್ಷಕರು, ಉಡುಪಿ ಅಜ್ಜರಕಾಡು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಮಚಂದ್ರ ಪಾಟ್ಕರ್, ತೆಂಕನಿಡಿಯೂರು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರೋಶನ್ ಕುಮಾರ್ ಶೆಟ್ಟಿ,
ಉಪಸ್ಥಿತರಿದ್ದರು.
ವಾಣಿಜ್ಯವಿಭಾಗದ ಉಪನ್ಯಾಸಕಿ ಅಕ್ಷತಾರಾವ್ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎಂಕಾಂ ವಿಭಾಗದ ಪ್ರಾದ್ಯಾಪಕರಾದ
ಅವಿನಾಶ್ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜಯಬಾರತಿ ಎ ವಂದಿಸಿದರು.