ಉಡುಪಿ: ಟಿಕೆಟ್‌ ರಹಿತ ಪ್ರಯಾಣ- ಇಬ್ಬರು ಅಪ್ರಾಪ್ತರು ವಶಕ್ಕೆ

ಉಡುಪಿ : ರೈಲಿನಲ್ಲಿ ಟಿಕೆಟ್ ಇಲ್ಲದೆ, ದಿವ್ಯಾಂಗರಿಗೆ ಮೀಸಲಿಟ್ಟಿದ್ದ ಭೋಗಿಯಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಪ್ರಾಯದ ಬಾಲಕ- ಬಾಲಕಿಯನ್ನು ಕರ್ತವ್ಯ ನಿರ್ವಹಿಸುತ್ತಿದ್ದ ತಪಾಸಾಣಾಧಿಕಾರಿ ಕೆ. ವಾಸುದೇವ್ ಪೈ ವಶಕ್ಕೆ ಪಡೆದುಕೊಂಡಿರುವ ಘಟನೆಯು ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ನಡೆದಿದೆ.

ತಪಾಸಾಣಾಧಿಕಾರಿ ಅಪ್ರಾಪ್ತ ಮಕ್ಕಳನ್ನು ಕಾನೂನು ಪ್ರಕ್ರಿಯೆ ನಡೆಸಲು ರೈಲ್ವೆ ಆ‌ರ್.ಪಿ.ಎಫ್ ಸುಧೀರ್ ಶೆಟ್ಟಿಯವರ ಸಮ್ಮುಖ ಹಾಜರುಪಡಿಸಿದರು. ಇವರಿಬ್ಬರು ಸಹೋದರ ಸಹೋದರಿಯರಾಗಿದ್ದು, ದರ್ಶನ್ (15) ಧನಲಕ್ಷ್ಮೀ (12) ಎಂದು ತಿಳಿದುಬಂದಿದೆ. ಇವರು ಬೆಂಗಳೂರು ಬ್ಯಾಟರಾಯನಪುರದ ಆಂಜನೇಯ ಸ್ವಾಮಿ ದೇವಸ್ಥಾನ ಹತ್ತಿರದ ನಿವಾಸಿಗಳೆಂದು ತಿಳಿದುಬಂದಿದೆ. ಇವರು ಹೆತ್ತವರಿಗೆ ತಿಳಿಸದೆ ಮನೆಬಿಟ್ಟು ಬಂದಿದ್ದರು.
ವಿಚಾರಣೆ ಪ್ರಕ್ರಿಯೆಗಳು ಮುಗಿದ ಬಳಿಕ ರೈಲ್ವೇ ಪೋಲಿಸರು ಹೆತ್ತವರಿಗೆ ವಿಷಯ ಮುಟ್ಟಿಸಿದ್ದು, ಮಕ್ಕಳನ್ನು ನಿಟ್ಟೂರಿನಲ್ಲಿರುವ ಮಕ್ಕಳ ಕಲ್ಯಾಣಸಮಿತಿಗೆ ಒಪ್ಪಿಸಲಾಗಿದೆ. ಕಾರ್ಯಾಚರಣೆಗೆ ಸಮಾಜ ಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದರು.