ಲಡಾಖ್: ನದಿಗೆ ಉರುಳಿದ ಭಾರತೀಯ ಸೇನೆಯ ಬಸ್; 7 ಯೋಧರು ಹುತಾತ್ಮ

ಲಡಾಖ್: 26 ಭಾರತೀಯ ಸೈನಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಒಂದು ನದಿಗೆ ಉರುಳಿ 7 ಯೋಧರು ಹುತಾತ್ಮರಾಗಿರುವ ದುರ್ಘಟನೆ ಲಡಾಖ್ ನಲ್ಲಿ ನಡೆದಿದೆ. ಸಿಯಾಚಿನ್‌ನ ನೈಋತ್ಯ ಭಾಗದ ಲಡಾಕ್‌ನಲ್ಲಿರುವ ಶ್ಯೋಕ್ ನದಿಗೆ ಸೈನಿಕರು ಪ್ರಯಾಣಿಸುತ್ತಿದ್ದ ಬಸ್‌ ಸ್ಕಿಡ್ ಆಗಿ ಶುಕ್ರವಾರ ಕನಿಷ್ಠ 7 ಭಾರತೀಯ ಸೇನಾ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಲೇಹ್ ಜಿಲ್ಲೆಯ ತುರ್ತುಕ್ ಸೆಕ್ಟರ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಹಲವಾರು ಸೈನಿಕರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಸೇನಾ ಮೂಲಗಳು ತಿಳಿಸಿವೆ.

ಗಂಭೀರವಾಗಿ ಗಾಯಗೊಂಡಿರುವ ಯೋಧರನ್ನು ಸ್ಥಳಾಂತರಿಸಲು ಭಾರತೀಯ ವಾಯುಪಡೆಯಿಂದ ಬೆಂಬಲವನ್ನು ಕೋರಲಾಗಿದೆ. ಸೈನಿಕರು ಪಾರ್ತಾಪುರದ ಟ್ರಾನ್ಸಿಟ್ ಕ್ಯಾಂಪ್‌ನಿಂದ ತುರ್ತುಕ್ ಸೆಕ್ಟರ್‌ನ ಉಪ-ಸೆಕ್ಟರ್ ಹನೀಫ್‌ನಲ್ಲಿರುವ ಮುಂದಿನ ಸ್ಥಳಕ್ಕೆ ತೆರಳುತ್ತಿದ್ದರು. ಬೆಳಿಗ್ಗೆ 9 ಗಂಟೆಯ ಸುಮಾರಿಗೆ, ಥೋಯಿಸ್‌ನಿಂದ ಸುಮಾರು 25 ಕಿಮೀ ದೂರದಲ್ಲಿ, ಬಸ್ ಸುಮಾರು 50 ರಿಂದ 60 ಅಡಿಗಳಷ್ಟು ಶ್ಯೋಕ್ ನದಿಗೆ ಬಿದ್ದು, ಬಸ್ಸಿನಲ್ಲಿದ್ದ ಎಲ್ಲಾ ಯೋಧರಿಗೆ ಗಾಯಗಳಾಗಿವೆ.

ಕ್ಷಿಪ್ರ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿ ಎಲ್ಲಾ ಸೈನಿಕರನ್ನು ಪಾರ್ತಾಪುರದ ಕ್ಷೇತ್ರ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಏಳು ಸೈನಿಕರು ದುರ್ಘಟನೆಗೆ ಬಲಿಯಾಗಿ ಹುತಾತ್ಮರಾಗಿದ್ದಾರೆ.