ಉಡುಪಿ: ಕೊಂಕಣ ರೈಲ್ವೆಯು ಕರಾವಳಿಯ ಜೀವನಾಡಿಯಾಗಿದ್ದು, ಕರಾವಳಿಯನ್ನು ಉತ್ತರ
ಭಾರತದೊಂದಿಗೆ ಜೋಡಿಸುವ ಮಾರ್ಗವಾಗಿದೆ. ಪರಿಸರದ ಹಲವು ಅಡೆತಡೆಗಳನ್ನು ಎದುರಿಸಿ ಆರಂಭಗೊಂಡ ಈ ರೈಲ್ವೆ ಮಾರ್ಗವನ್ನು ಪ್ರಸ್ತುತ ವಿದ್ಯುತ್ತೀಕರಣಗೊಳಿಸಿರುವುದರಿಂದ ವಾರ್ಷಿಕವಾಗಿ 300 ಕೋಟಿ ರೂ. ಉಳಿತಾಯವಾಗಲಿದೆ. ದೇಶದಲ್ಲಿ 2024 ರೊಳಗೆ 67956 ಕಿ.ಮೀ. ರೈಲು ಮಾರ್ಗವನ್ನು ವಿದ್ಯುತ್ತೀಕರಣಗೊಳಿಸುವ ಯೋಜನೆಯಿದ್ದು, ಈಗಾಗಲೇ 45881 ಕಿ.ಮೀ. ಯೋಜನೆ ಪೂರ್ಣವಾಗಿದ್ದು, ಇದಕ್ಕಾಗಿ 13500 ಕೋಟಿ ರೂ. ವೆಚ್ಚವಾಗಿದೆ. ಇನ್ನು 2 ವರ್ಷದಲ್ಲಿ ಬಾಕಿ ಕಾಮಗಾರಿ ಪೂರ್ಣಗೊಳ್ಳಲಿದೆ. ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಸೋಮವಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ ಕೊಂಕಣ ರೈಲ್ವೆಯ ವಿದ್ಯುತ್ತೀಕರಣ ಯೋಜನೆಯ ವರ್ಚುವಲ್ ಕಾರ್ಯಕ್ರಮವನ್ನು, ಉಡುಪಿ ರೈಲ್ವೆ ನಿಲ್ದಾಣದಲ್ಲಿ ವೀಕ್ಷಿಸಿ ಮಾತನಾಡಿದರು.
ಮಹಾರಾಷ್ಟ್ರದ ರೋಹಾದಿಂದ ಮಂಗಳೂರಿನ ತೋಕೂರುವರೆಗಿನ 740 ಕಿ.ಮೀ ಉದ್ದದ ಕೊಂಕಣ ರೈಲು ಮಾರ್ಗವನ್ನು 1287 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ತೀಕರಣಗೊಳಿಸಿದ್ದು, ಇದರಿಂದ ವಾರ್ಷಿಕ ಇಂಧನ ವೆಚ್ಚ 180 ಕೋಟಿ ರೂ. ಹಾಗೂ ನಿರ್ವಹಣಾ ವೆಚ್ಚ 120 ಕೋಟಿ ರೂ. ಗಳ ಉಳಿತಾಯವಾಗಲಿದ್ದು, ವಿದ್ಯುತ್ ಬಳಕೆಯಿಂದ ಕಲ್ಲಿದ್ದಲ್ಲಿನ ಬಳಕೆ ಪ್ರಮಾಣ ಕಡಿಮೆಯಾಗಿ, ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಹಾಗೂ ಪ್ರಯಾಣಿಕರಿಗೆ ವೇಗವಾಗಿ ತಮ್ಮ ಸ್ಥಳಗಳಿಗೆ ತಲುಪಲು ಸಾಧ್ಯವಾಗಲಿದೆ. ಈ ಮಾರ್ಗದಲ್ಲಿ 16 ಮೈಲ್ ಎಕ್ಸ್ಪ್ರೆಸ್ ಹಾಗೂ 10 ಗೂಡ್ಸ್ ರೈಲುಗಳು ಸಂಚರಿಸಲಿವೆ ಎಂದರು.
ಕೇಂದ್ರ ಸರ್ಕಾರದ 8 ವರ್ಷಗಳ ಆಡಳಿತದ ಅವಧಿಯಲ್ಲಿ ಶೌಚಾಲಯ, ವಸತಿ, ವಿದ್ಯುತ್ ಸೇರಿದಂತೆ
ಹಲವು ಕ್ಷೇತ್ರಗಳಲ್ಲಿ ಪ್ರಗತಿಪರ ಅಭಿವೃದ್ಧಿ ಕಾರ್ಯಗಳಾಗಿವೆ. ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ , ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸಲು ಮತ್ತು ಆಹಾರ ಪದಾರ್ಥಗಳನ್ನು ರಫ್ತು ಮಾಡಲು ಹೆಚ್ಚು ಆದ್ಯತೆ ನೀಡಲಾಗುತಿದ್ದು, ವಿಶ್ವದಲ್ಲಿ ಆಹಾರ ಪದಾರ್ಥಗಳ ರಫ್ತಿನಲ್ಲಿ ದೇಶ ಪ್ರಸ್ತುತ 9 ನೇ ಸ್ಥಾನದಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಕೊಂಕಣ ರೈಲ್ವೆಯ ಕಾರವಾರ ಪ್ರಾದೇಶಿಕ ಕಚೇರಿಯ ಕ್ಷೇತ್ರಿಯ ಪ್ರಬಂಧಕ ಬಿ.ಬಿ.ನಿಕ್ಕಂ, ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಕೊಂಕಣ ರೈಲ್ವೆಯ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ನಾಯಕ್ ಸ್ವಾಗತಿಸಿದರು.












