ಬೆಂಗಳೂರು : ರಾಜ್ಯ ಹೈಕೋರ್ಟ್ಗೆ ಮೂವರು ಎಚ್ಚುವರಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಹಾಲಿ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಗೀತಾ ಕಡಬ ಭರತರಾಜ ಶೆಟ್ಟಿ, ಬೊರಕಟ್ಟೆ ಮುರಳೀಧರ ಪೈ ಮತ್ತು ತ್ಯಾಗರಾಜ ನಾರಾಯಣ ಇನವಳ್ಳಿ ಅವರಿಗೆ ಪದೋನ್ನತಿ ನೀಡಿ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಟ್ಬಾಲ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸಿಜೆಐ ಬಿ.ಆರ್.ಗವಾಯಿ ಅಧ್ಯಕ್ಷತೆಯಲ್ಲಿನಡೆದ ಕೊಲಿಜಿಯಂ ಸಭೆಯಲ್ಲಿಈ ಮೂವರು ಹಿರಿಯ ನ್ಯಾಯಾಧೀಶರಿಗೆ ತಮ್ಮ ಸೇವಾ ಹಿರಿತನದ ಆಧಾರದಲ್ಲಿಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ಇದೀಗ ಆದೇಶ ಹೊರಡಿಸಲಾಗಿದೆ. ಈ ಮಧ್ಯೆ, ಈವರೆಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ವಿ.ಅರವಿಂದ್ ಅವರ ಸೇವೆಯನ್ನು ಖಾಯಂಗೊಳಿಸಿ ಆದೇಶ ಹೊರಡಿಸಲಾಗಿದೆ.
ಹೈಕೋರ್ಟ್ಗೆ 62 ನ್ಯಾಯಮೂರ್ತಿಗಳ ಹುದ್ದೆ ಮಂಜೂರಾಗಿದ್ದು, ಆ ಪೈಕಿ ಸದ್ಯ 46 ನ್ಯಾಯಮೂರ್ತಿಗಳು ಸೇವೆ ಸಲ್ಲಿಸುತ್ತಿದ್ದರು. ಶುಕ್ರವಾರವಷ್ಟೇ ನ್ಯಾ.ಜೆ.ಎಂ.ಖಾಜಿ ನಿವೃತ್ತಿ ಹೊಂದಿದರು. ಹಾಗಾಗಿ, ನ್ಯಾಯಮೂರ್ತಿಗಳ ಸಂಖ್ಯೆ 45ಕ್ಕೆ ಇಳಿದಿತ್ತು. ಇದೀಗ ಮೂವರು ಹೊಸ ನ್ಯಾಯಮೂರ್ತಿಗಳ ನೇಮಕದಿಂದ ಸಂಖ್ಯೆ 48ಕ್ಕೆ ಏರಿಕೆಯಾಗಲಿದೆ.


















