ಆಕ್ಸಿಜನ್ ಕೊರತೆಯಿಂದ 24 ಮಂದಿ ಮೃತಪಟ್ಟಿಲ್ಲ, ಕೇವಲ 3 ಮಂದಿ ಸತ್ತಿರೋದು: ಸಚಿವ ಸುಧಾಕರ್

ಚಾಮರಾಜನಗರ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದ ಸಾವನ್ನಪ್ಪಿದವರು ಕೇವಲ 3 ಮಂದಿ ಮಾತ್ರ ಎಂದು ಜಿಲ್ಲಾಡಳಿತ ಹೇಳಿದೆ. ಇದು ಪ್ರಾಥಮಿಕ ಮಾಹಿತಿಯಾಗಿದ್ದು, ಈ ಕುರಿತು ತನಿಖೆ ನಡೆಯಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ವೈದ್ಯರು ಕೊಟ್ಟ ಮಾಹಿತಿ ಪ್ರಕಾರ ನಿನ್ನೆ ಬೆಳಗ್ಗೆ 7 ರಿಂದ ಮಧ್ಯರಾತ್ರಿ 12 ರವರೆಗೆ ಕೋವಿಡ್​ನಿಂದ 14 ಮಂದಿ ಸಾವನ್ನಪ್ಪಿದ್ದಾರೆ. ಇವರೆಲ್ಲ 14 -16 ದಿನಗಳಿಂದ ಕೊರೊನಾ ತೀವ್ರವಾದ ಮೇಲೆ ಆಸ್ಪತ್ರೆಗೆ ಬಂದಿದ್ದು, ಕೋವಿಡ್​ನ ಸಹಜ ಖಾಯಿಲೆಯಿಂದ ತೀರ್ಕೊಂಡಿದ್ದಾರೆ ಎಂದರು.

ಮಧ್ಯರಾತ್ರಿ 12 ಗಂಟೆಯಿಂದ ಮುಂಜಾನೆ 3 ರವರೆಗೆ 3 ಜನ ಅಸುನೀಗಿದ್ದಾರೆ. ಮುಂಜಾನೆ 3 ರಿಂದ ಬೆಳಗ್ಗೆ 7 ಗಂಟೆವರೆಗೆ 7 ರೋಗಿಗಳು ಅಸುನೀಗಿದ್ದಾರೆ. 24 ಗಂಟೆಯಲ್ಲಿ 23 ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕಾಮಗೆರೆಯಲ್ಲಿ ಒಬ್ಬರು ತೀರ್ಕೊಂಡಿದ್ದಾರೆ. ಆಕ್ಸಿಜನ್​ನಿಂದ ತೀರಿಕೊಂಡವರು ಜಿಲ್ಲಾಡಳಿತದ ಪ್ರಕಾರ 3 ರೋಗಿಗಳು ಮಾತ್ರ. ಇದು ಪ್ರಾಥಮಿಕವಾಗಿ ವೈದ್ಯರು, ಜಿಲ್ಲಾಡಳಿತ ಕೊಟ್ಟಿರುವ ಮಾಹಿತಿ ಎಂದು ಹೇಳಿದರು.

ಚಾಮರಾಜಗನರ ಜಿಲ್ಲೆಯಲ್ಲಿ 24 ಗಂಟೆಯಲ್ಲಿ 24 ಜನ ಕೋವಿಡ್​ಗೆ ದುರ್ಮರಣ ಆಗಿರುವುದು ನೋವು ತಂದಿದೆ. ಕುಟುಂಬದ ಜನರಿಗೆ ದುಃಖ ಭರಿಸುವ ಶಕ್ತಿ ಕೊಡಲಿ. ಕುಟುಂಬದವರಿಗೆ ಸಾಂತ್ವನದ ಜೊತೆಗೆ ಸರ್ಕಾರದ ಸಹಕಾರವೂ ಇದೆ. ಸಿಎಂ ಕೂಡ ಘಟನೆಯ ಬಗ್ಗೆ ಫೋನ್​ನಲ್ಲಿ ಮಾತಾಡಿ ಸಮಗ್ರ ತನಿಖೆ ಮಾಡೋಣ ಎಂದು ಹೇಳಿದ್ದಾರೆ ಎಂದರು.