ಲೋಕಸಭೆಯಲ್ಲಿ 22, ರಾಜ್ಯಸಭೆಯಲ್ಲಿ 25 ಮಸೂದೆ ಅಂಗೀಕಾರ : ಮುಂಗಾರು ಅಧಿವೇಶನ ಅಂತ್ಯ

ನವದೆಹಲಿ : ಸಂಸತ್ತಿನ ಉಭಯ ಸದನಗಳನ್ನು ಶುಕ್ರವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಕೆಳಮನೆಯಲ್ಲಿ ಶೇ 45 ಮತ್ತು ಮೇಲ್ಮನೆಯಲ್ಲಿ ಶೇ 63ರಷ್ಟು ಉತ್ಪಾದಕತೆಯನ್ನು ದಾಖಲಿಸಿದ್ದ ಮುಂಗಾರು ಅಧಿವೇಶನಕ್ಕೆ ಅಂತ್ಯ ಹಾಡಲಾಗಿದೆ.ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, 23 ದಿನಗಳ ಸುದೀರ್ಘ ಅಧಿವೇಶನದಲ್ಲಿ ಒಟ್ಟು 17 ಅಧಿವೇಶನಗಳು (sittings) ನಡೆದಿವೆ ಎಂದು ಹೇಳಿದರು. ಸಂಸತ್​ ಕಲಾಪ ಇಂದು ಅಂತ್ಯಗೊಂಡಿದ್ದು, ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಲೋಕಸಭೆಯ ಉತ್ಪಾದಕತೆಯು ಶೇಕಡಾ 45 ಮತ್ತು ರಾಜ್ಯಸಭೆಯ ಉತ್ಪಾದಕತೆ ಶೇಕಡಾ 63 ರಷ್ಟಿದೆ ಎಂದು ಅವರು ಹೇಳಿದರು. ಸಂಸತ್​ ಕಲಾಪ ಇಂದು ಮುಕ್ತಾಯಗೊಂಡಿದೆ. ಜುಲೈ 20 ರಂದು ಪ್ರಾರಂಭವಾದ ಅಧಿವೇಶನ ಇಂದು ಆಗಸ್ಟ್ 11 ರಂದು ಕೊನೆಗೊಂಡಿದೆ. 23 ದಿನಗಳಲ್ಲಿ ಒಟ್ಟು 17 ಅಧಿವೇಶನಗಳು ನಡೆದವು. ಲೋಕಸಭೆಯಲ್ಲಿ ಒಟ್ಟು 20 ಮಸೂದೆಗಳನ್ನು ಮತ್ತು ರಾಜ್ಯಸಭೆಯಲ್ಲಿ 5 ಮಸೂದೆಗಳನ್ನು ಮಂಡಿಸಲಾಗಿದೆ ಎಂದು ಕೇಂದ್ರ ಸಚಿವ ಜೋಶಿ ತಿಳಿಸಿದರು.

ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದುರದೃಷ್ಟವಶಾತ್ ರಾಜಕೀಯ ಕಾರಣಗಳಿಗಾಗಿ ಪ್ರತಿಪಕ್ಷಗಳು ಚರ್ಚೆಯಲ್ಲಿ (ಮಸೂದೆಗಳ ಬಗ್ಗೆ) ಭಾಗವಹಿಸಲಿಲ್ಲ. ಅವರು ದೆಹಲಿ ಸೇವೆಗಳ ಮಸೂದೆಯ ಚರ್ಚೆಯಲ್ಲಿ ಮಾತ್ರ ಭಾಗವಹಿಸಿದರು. ಚರ್ಚೆಯಿಲ್ಲದೆ ಮಸೂದೆಯನ್ನು ಅಂಗೀಕರಿಸಬೇಕೆಂದು ಸರ್ಕಾರ ಎಂದಿಗೂ ಬಯಸಲಿಲ್ಲ. ಸಹಜವಾಗಿ ನಾವು ಚರ್ಚೆಯಿಲ್ಲದೆ ಯಾವುದನ್ನೂ ಅಂಗೀಕರಿಸಿಲ್ಲ. ರಾಜ್ಯಸಭೆಯಲ್ಲಿ ಬಹುತೇಕ ಎಲ್ಲ ಮಸೂದೆಗಳ ಬಗ್ಗೆ ಚರ್ಚೆಗಳು ನಡೆದವು ಎಂದರು.ಲೋಕಸಭೆಯಲ್ಲಿ ಒಟ್ಟು 22 ಮಸೂದೆಗಳು, ರಾಜ್ಯಸಭೆಯಲ್ಲಿ 25 ಮಸೂದೆಗಳು ಮತ್ತು ಉಭಯ ಸದನಗಳಲ್ಲಿ 23 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಐಪಿಸಿ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್​ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಬದಲಿಸುವ ಗೃಹ ಸಚಿವಾಲಯದ ಮೂರು ಮಸೂದೆಗಳನ್ನು ಗೃಹ ಸ್ಥಾಯಿ ಸಮಿತಿಗೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಮಾರೋಪ ಭಾಷಣ ಮಾಡಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಸದನವು 39 ಗಂಟೆಗಳ ಕಾಲ ಕಾರ್ಯನಿರ್ವಹಿಸಿತು ಮತ್ತು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ, 2023 ಮತ್ತು ದೆಹಲಿ ಸರ್ಕಾರದ (ತಿದ್ದುಪಡಿ) ಮಸೂದೆ, 2023 ಸೇರಿದಂತೆ ಪ್ರಮುಖ ಮಸೂದೆಗಳನ್ನು ಅಂಗೀಕರಿಸಿತು ಎಂದು ಹೇಳಿದರು. ಮಾನ್ಸೂನ್ ಅಧಿವೇಶನದಲ್ಲಿ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಬೆಂಬಲದೊಂದಿಗೆ ಅವಿಶ್ವಾಸ ನಿರ್ಣಯವನ್ನು ತಂದಿತು. ಆದರೆ ನಿರ್ಣಯವನ್ನು ಧ್ವನಿ ಮತದಿಂದ ಸೋಲಿಸಲಾಯಿತು.ಏತನ್ಮಧ್ಯೆ, ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ ಅವರನ್ನು “ಹಕ್ಕುಚ್ಯುತಿ” ಗಾಗಿ ರಾಜ್ಯಸಭೆಯಿಂದ ಶುಕ್ರವಾರ ಅಮಾನತುಗೊಳಿಸಲಾಗಿದೆ. ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಮಸೂದೆ, 2023 ರ ಉದ್ದೇಶಿತ ಆಯ್ಕೆ ಸಮಿತಿಯಲ್ಲಿ ಮೇಲ್ಮನೆಯ ಕೆಲ ಸದಸ್ಯರ ಹೆಸರುಗಳನ್ನು ಅವರ ಒಪ್ಪಿಗೆಯಿಲ್ಲದೆ ಸೇರಿಸಿದ್ದಕ್ಕಾಗಿ ಎಎಪಿ ನಾಯಕ ಚಡ್ಡಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಸದನದ ನಾಯಕ ಪಿಯೂಷ್ ಗೋಯಲ್ ಮಂಡಿಸಿದ ನಿರ್ಣಯದ ನಂತರ ಅವರನ್ನು ಅಮಾನತುಗೊಳಿಸಲಾಯಿತು.