ಉಡುಪಿ ಜಿಲ್ಲಾ ಕಂದಾಯ ಇಲಾಖೆಯಲ್ಲಿ ಇ- ಆಫೀಸ್ ಸೇವೆ ಶೇ.100 ಅನುಷ್ಠಾನ

ಉಡುಪಿ: ಕಂದಾಯ ಇಲಾಖೆಯು ಸರಕಾರದ ಒಂದು ಪ್ರಮುಖ ಇಲಾಖೆಯಾಗಿದ್ದು, ಮಾತೃ ಇಲಾಖೆ ಎಂದು ಗುರುತಿಸಿಕೊಳ್ಳುತ್ತದೆ. ಮುಖ್ಯಮಂತ್ರಿಗಳ ಹಾಗೂ ಕಂದಾಯ ಸಚಿವರ ನಿರ್ದೇಶನದಂತೆ ಸಾರ್ವಜನಿಕರು ದಿನನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆಯದಂತೆ ನೋಡಿಕೊಳ್ಳಲು ಕಂದಾಯ ಇಲಾಖೆಯಲ್ಲಿ ಹೊಸ ತಂತ್ರಜ್ಞಾನದ ಬಳಕೆ, ನಿಗದಿತ ಕಾಲ ಮಿತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಮುಂದಾಗಿದೆ.

ಉತ್ತಮ ಸೇವೆ ನೀಡುವುದರ ಮೂಲಕ ಕಳೆದ ಆರು ತಿಂಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಂದಾಯ ಇಲಾಖೆಯ ಮೂಲಕ ಹಲವು ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು, ಅಭಿವೃದ್ಧಿಯನ್ನು ಆದ್ಯತೆಯನ್ನಾಗಿಸಿ, ಸರ್ಕಾರ ಕಾರ್ಯೋನ್ಮುಖವಾಗುವುದರೊಂದಿಗೆ ಶೇ. 100 ರಷ್ಟು ಪ್ರಗತಿ ಸಾಧಿಸಲು ಮುಂದಾಗಿದೆ.

ಇ-ಆಫೀಸ್ ಅನುಷ್ಠಾನ: ಜನರಿಗೆ ಶೀಘ್ರ ಮತ್ತು ಸರಳ ಆಡಳಿತ ನೀಡಲು ಇ-ಆಫೀಸ್ ಸಹಕಾರಿಯಾಗಿದ್ದು, ಎಲ್ಲಾ ಕಡತಗಳನ್ನು ಇ- ಆಫೀಸ್ ಮೂಲಕವೇ ವಿಲೇವಾರಿ ಮಾಡಿ ಎಂಬುದು ಪ್ರಮುಖ ಯೋಜನೆಯಾಗಿದೆ. ಜಿಲ್ಲೆಯಾದ್ಯಂತ ಕಂದಾಯ ಕಚೇರಿಗಳಾದ ಜಿಲ್ಲಾಧಿಕಾರಿಗಳ ಕಚೇರಿ, ಸಹಾಯಕ ಅಯುಕ್ತರ ಕಚೇರಿ ಹಾಗೂ ಎಲ್ಲಾ ತಹಶೀಲ್ದಾರರುಗಳ ಕಚೇರಿಗಳಲ್ಲಿ ಶೇ.100 ರಷ್ಟು ಇ-ಆಫೀಸ್ ಅನುಷ್ಠಾನಗೊಳಿಸಲಾಗಿರುತ್ತದೆ. ಇ-ಆಫೀಸ್ ತಂತ್ರಾಂಶದ ಮೂಲಕ ಜಿಲ್ಲೆಯ ಕಂದಾಯ ಕಚೇರಿಗಳಲ್ಲಿ ಒಟ್ಟು 16,165 ಕಡತಗಳನ್ನು ಸೃಷ್ಟಿಸಿದ್ದು ಹಾಗೂ ಅಧೀನ ಇಲಾಖೆಯ ಇತರೆ ಇಲಾಖೆಗಳ 93,687 ಕಡತಗಳು ಸ್ವೀಕೃತಿಗೊಂಡಿದ್ದು, ಒಟ್ಟು 1,09,271 ಕಡತಗಳು ವಿಲೇವಾರಿಯಾಗಿರುತ್ತದೆ.

ಭೂಮಿ ತಂತ್ರಾಂಶದಡಿ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿನಿಂದ ಪ್ರಗತಿ ಸಾಧಿಸಿರುವ ಮ್ಯುಟೇಶನ್ ವಿವರಗಳು: ಭೂಮಿ ತಂತ್ರಾಂಶದಡಿ ಮ್ಯುಟೇಶನ್ ವಿಥ್‌ ಔಟ್ ನೋಟೀಸ್ ಒನ್ ಡೇ ಅಡಿ 42,234 ಪ್ರಕರಣಗಳನ್ನು ವಿಲೇವಾರಿ ಮಾಡಿ, ಶೇ. 99.64 ರಷ್ಟು, ಮ್ಯುಟೇಶನ್ ವಿಥ್ ನೋಟೀಸ್ ಸೆವೆನ್ ಡೇಸ್ ಅಡಿ 8675 ಪ್ರಕರಣಗಳನ್ನು ವಿಲೇವಾರಿ ಮಾಡಿ, ಶೇ. 96.26 ರಷ್ಟು ಹಾಗೂ ಮ್ಯುಟೇಶನ್ ವಿಥ್ ನೋಟೀಸ್ ಫಿಫ್‌ಟೀನ್ ಡೇಸ್ ಅಡಿ ಒಟ್ಟು 5141 ಪ್ರಕರಣಗಳನ್ನು ವಿಲೇವಾರಿ ಮಾಡಿ, ಶೇ. 91.16 ರಷ್ಟು ಪ್ರಗತಿಯನ್ನು ಸಾಧಿಸಲಾಗಿರುತ್ತದೆ.

ಅಟಲ್ ಜನಸ್ನೇಹಿ ಕೇಂದ್ರ: ಸೇವಾಸಿಂಧು ಪೋರ್ಟಲ್‌ನಲ್ಲಿ ನಾಗರಿಕರಿಗೆ ಕಂದಾಯ ಸೇವೆಗಳನ್ನು ಪಡೆಯಲು ಒಂದು ವೇದಿಕೆಯನ್ನು ಒದಗಿಸಿದೆ. ಜಿಲ್ಲೆಯಾದ್ಯಂತ ಒಟ್ಟು 10 ಅಟಲ್ ಜೀ ಜನಸ್ನೇಹಿ ಕೇಂದ್ರವು ಕಾರ್ಯನಿರ್ವಹಿಸುತ್ತಿದ್ದು, ಎ.ಜೆ.ಎಸ್.ಕೆ ಅಡಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸ್ತವ್ಯ ದೃಢಪತ್ರ, ವಂಶವೃಕ್ಷ, ಪಿಂಚಣಿ, ಸಂಧ್ಯಾ ಸುರಕ್ಷ ಯೋಜನೆ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಪಿಹೆಚ್‌ಪಿ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ದಾಪ್ಯ ಯೋಜನೆ, ಮೈತ್ರಿ, ಮನಸ್ವಿನಿ ಹಾಗೂ ಇತರೆ ಸೇವೆಗಳ ಪ್ರಯೋಜನವನ್ನು ಜನಸಾಮಾನ್ಯರು ಪಡೆದುಕೊಳ್ಳುತ್ತಿದ್ದಾರೆ. ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಒಟ್ಟು 76,870 ಅರ್ಜಿಗಳು ಸ್ವೀಕೃತವಾಗಿದ್ದು, 73,204 ಅರ್ಜಿಗಳನ್ನು ವಿಲೇವಾರಿ ಮಾಡಿ, ಶೇ. 95.23 ಸಾಧನೆ ಮಾಡಲಾಗಿರುತ್ತದೆ.

ಕಂದಾಯ ನ್ಯಾಯಾಲಯದ ಕಡತ ವಿಲೇವಾರಿ: ಕರ್ನಾಟಕ ಭೂಕಂದಾಯ ಕಾಯ್ದೆ ಅಡಿಯಲ್ಲಿ ಸಾರ್ವಜನಿಕರು ಹಾಗೂ ರೈತರಿಗೆ ಮೇಲ್ಮನವಿ ಅಥವಾ ಪುನರ್ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಒಟ್ಟು 154 ಪ್ರಕರಣಗಳು ಮತ್ತು ಕುಂದಾಪುರ ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಒಟ್ಟು 765 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿರುತ್ತದೆ.

ಪೈಕಿ ಆರ್.ಟಿ.ಸಿ ವಿಲೇವಾರಿ ಮತ್ತು ಸರಕಾರಿ ಭೂಮಿಯನ್ನು ಭೂಮಿ ತಂತ್ರಾಂದ ಮೂಲಕ ಪ್ಲ್ಯಾಗಿಂಗ್: ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಒಟ್ಟು 11,074 ಪೈಕಿ ಆರ್.ಟಿ.ಸಿ ಪ್ರಕರಣಗಳನ್ನು ಹಾಗೂ ಭೂಮಿ ತಂತ್ರಾಂಶದ ಮೂಲಕ ಒಟ್ಟು 84,407 ಪ್ಲಾಟ್‌ಗಳನ್ನು ಪ್ಲ್ಯಾಗ್ ಮಾಡಿರುವುದಾಗಿ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.