ಹಾಸನ: ನೆಲಕ್ಕುರುಳಿದ ಮೋಟಾರ್ ಬೈಕ್; ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಗುರುವಾರದಂದು ಮೋಟರ್ ಬೈಕ್ ಹಿಂಬದಿ ಸವಾರಳಾಗಿದ್ದ 11 ವರ್ಷದ ಶಾಲಾ ಬಾಲಕಿಯೊಬ್ಬಳು ಮಳೆ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಗುರುವಾರ ಸಂಭವಿಸಿದೆ.

ಐದನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಹೆಗ್ಗದಗೆರೆ ನಿವಾಸಿ ರಂಜಿತಾ ತನ್ನ ಸಂಬಂಧಿಯೊಬ್ಬರ ಬೈಕಿನಲ್ಲಿ ಹಿಂಬದಿ ಸವಾರಳಾಗಿ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಭಾರೀ ಮಳೆಯ ಕಾರಣದಿಂದ ಇಲ್ಲಿನ ದಡ್ಡಿಹಳ್ಳಿಯ ಕೆರೆಯ ನೀರು ಉಕ್ಕೇರಿ ಹರಿದ ಪರಿಣಾಮ ಬೈಕ್ ನೆಲಕ್ಕೆ ಉರುಳಿದೆ. ಇದನ್ನು ಕಂಡ ಗ್ರಾಮಸ್ಥರು ಬೈಕ್ ಚಾಲಕನನ್ನು ರಕ್ಷಿಸಿದ್ದಾರೆ ಆದರೆ ದುರಾದೃಷ್ಟವಶಾತ್ ಬಾಲಕಿ ರಂಜಿತಾ ನೀರಿನಲ್ಲಿ ಮುಳುಗಿ ಕೊಚ್ಚಿಹೋಗಿದ್ದಾಳೆ. ಆಕೆಯ ಮೃತಶರೀರವನ್ನು ನಂತರ ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.