ದಸರಾ ಆಚರಣೆಗೆ ₹30 ಕೋಟಿ ಅನುದಾನ: ಸಚಿವ ಡಾ‌.ಹೆಚ್.ಸಿ.ಮಹದೇವಪ್ಪ ಹೇಳಿಕೆ

ಮೈಸೂರು: “ಈ ಬಾರಿ ನಾಡಹಬ್ಬ ದಸರಾವನ್ನು ವಿಜೃಂಭಣೆಯಿಂದ ಆಚರಿಸಲು 30 ಕೋಟಿ ರೂ ಅನುದಾನ ಕೇಳಿದ್ದೇವೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ” ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.”ಈ ಹಿಂದೆ ಸಾಂಪ್ರದಾಯಿಕವಾಗಿ 9 ಆನೆಗಳನ್ನು ವೀರನಹೊಸಳ್ಳಿಯಿಂದ ಸ್ವಾಗತಿಸಿ, ಕಾಲ್ನಡಿಗೆಯ ಗಜಪಡೆ ಅರಮನೆ ಪ್ರವೇಶ ಮಾಡುತ್ತಿತ್ತು. ಆದರೆ ಕಾಲ್ನಡಿಗೆಯಲ್ಲಿಯೇ ಕರೆದುಕೊಂಡು ಬಂದರೆ ದಣಿವಾಗುತ್ತದೆ ಎಂದು 2004ರಿಂದ ವಾಹನದ ಮೂಲಕ ಕರೆತರಲಾಗುತ್ತಿದೆ. ಇಂದು ಒಂಬತ್ತು ಆನೆಗಳು ಬರುತ್ತವೆ. ಇನ್ನೂ ಐದು ಆನೆಗಳು ನಂತರ ಈ ತಂಡ ಸೇರಿಕೊಳ್ಳುತ್ತವೆ. ಒಟ್ಟು 14 ಆನೆಗಳನ್ನು ಜಂಬೂಸವಾರಿಯಲ್ಲಿ ಮಾವುತರು ಮತ್ತು ಕಾವಾಡಿಗಳು ಮುನ್ನಡೆಸುತ್ತಾರೆ. ಅವರಿಗೆ ಎಲ್ಲಾ ರೀತಿಯಲ್ಲಿ ಧನ ಸಹಾಯ, ಪ್ರೋತ್ಸಾಹ ನೀಡಲಾಗುತ್ತದೆ” ಎಂದು ತಿಳಿಸಿದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಬಾಗಿಲು ವೀರನಹೊಸಳ್ಳಿಯಲ್ಲಿ ಇಂದು ಗಜಪಡೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿದರು.ಭಾರತದ ಸಂವಿಧಾನವು ಪ್ರಜೆಗಳಿಗೆ ಧಾರ್ಮಿಕ ಅಭಿವ್ಯಕ್ತಿ ಮತ್ತು ಆಚರಣೆಯ ಸ್ವಾತಂತ್ರ್ಯವನ್ನು ಮುಕ್ತವಾಗಿ ಒದಗಿಸಿಕೊಟ್ಟಿದೆ. ಅದರಂತೆ ಚಾಮುಂಡೇಶ್ವರಿ ದೇವಿಯ ಜಂಬೂಸವಾರಿ ನಡೆಯಲಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.
ಸಚಿವ ಡಾ‌.ಹೆಚ್.ಸಿ.ಮಹದೇವಪ್ಪ

“ನಮ್ಮ ದೇಶದ ಸಮಗ್ರತೆ, ಐಕ್ಯತೆ ಮತ್ತು ಬಹುತ್ವವನ್ನು ಕಾಪಾಡಲು ಸರ್ಕಾರ ಸಿದ್ಧವಿರಬೇಕು. ಜನರು ಜವಾಬ್ದಾರಿಯುತವಾಗಿರಬೇಕು. ತಾವು ನಂಬಿರುವ ಆಚಾರ-ವಿಚಾರಗಳ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಂಪ್ರದಾಯಿಕ ದಸರಾ ಇಡೀ ಪ್ರಪಂಚದ ಗಮನ ಸೆಳೆದಿದೆ. ದೇಶ,ವಿದೇಶದಿಂದ ಲಕ್ಷಾಂತರ ಜನರು ದಸರಾದಲ್ಲಿ ಭಾಗವಹಿಸುತ್ತಾರೆ” ಎಂದು ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.

“ಗಜಪಯಣದ ಮೂಲಕ 9 ಆನೆಗಳನ್ನು ಇಂದು ಮೈಸೂರಿಗೆ ಕರೆತರಲಾಗುವುದು. ಇದರಲ್ಲಿ ಕಳೆದ ಬಾರಿ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಆನೆಯೇ, ಈ ಬಾರಿಯೂ ಸಹ ಚಿನ್ನದ ಅಂಬಾರಿಯನ್ನು ಹೊರುತ್ತಾನೆ” ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಖಚಿತಪಡಿಸಿದ್ದಾರೆ.”ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಜಿಲ್ಲಾಡಳಿತ ಮತ್ತು ಉನ್ನತ ಸಮಿತಿ ಸಭೆಯಲ್ಲಿ ನಮಗೆ ಈ ಬಾರಿ ಅದ್ಧೂರಿಯಾಗಿ ದಸರಾ ಆಚರಣೆ ಮಾಡಿ ಎಂದು ಸೂಚನೆ ಕೊಟ್ಟಿದ್ದಾರೆ. ಅದ್ಧೂರಿಯಾಗಿ ದಸರಾ ಆಚರಣೆ ಮಾಡಲು ಸರ್ಕಾರ ಸಿದ್ಧತೆಯನ್ನೂ ಮಾಡಿಕೊಂಡಿದೆ. ದಸರಾ ಕಾರ್ಯಕಾರಿ ಸಮಿತಿ ರಚಿಸುವುದಕ್ಕೆ ಸಭೆ ಮಾಡಿ ತೀರ್ಮಾನ ಮಾಡಿದ್ದೇವೆ. ನಮ್ಮ ದೇಶದ ಚಾರಿತ್ರಿಕ ಹಿನ್ನೆಲೆ, ವಿಜಯನಗರ ಸಾಮ್ರಾಜ್ಯ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್​ ಆಡಳಿತ, ಸಂವಿಧಾನದ ಆಶಯ, ಸ್ವಾತಂತ್ರ್ಯದ ಉದ್ದೇಶ ಸೇರಿದಂತೆ ಹಲವು ಅಂಶಗಳನ್ನು ಇಟ್ಟುಕೊಂಡು ದಸರಾವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ” ಎಂದರು.