ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಣಿಪಾಲ ವಲಯಮಟ್ಟದ ಪದಗ್ರಹಣ ಕಾರ್ಯಕ್ರಮ

ಉಡುಪಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ತಾಲ್ಲೂಕು ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘ ಒಕ್ಕೂಟ ಮಣಿಪಾಲ ವಲಯ ಹಾಗೂ ತಾಲ್ಲೂಕು ಜನಜಾಗೃತಿ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ವಲಯ ಮಟ್ಟದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಪದಗ್ರಹಣ ಕಾರ್ಯಕ್ರಮ ಶಿವಪಾಡಿಯ ಉಮಾಮಹೇಶ್ವರ ದೇವಸ್ಥಾನದಲ್ಲಿ ಇಂದು ನಡೆಯಿತು.

ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸತ್ಯನಾರಾಯಣ ಪೂಜೆ ನೆರವೇರಿತು. ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಉಡುಪಿ ತಾಲ್ಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸತ್ಯಾನಂದ ನಾಯಕ್ ಮಾತನಾಡಿ, ಯೋಜನೆಯ ಕಾರ್ಯಕ್ರಮ, ಗ್ರಾಮೀಣ ಜನರ ಅಭಿವೃದ್ಧಿ ಹಾಗೂ ಯೋಜನೆಯ ಕೆಲಸ ಕಾರ್ಯ ಬಗ್ಗೆ ಮಾಹಿತಿ ನೀಡಿದರು.

ತೆಂಗಿನ ಸಿರಿಯನ್ನು ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಲಯ ಜನಜಾಗೃತಿ ಸದಸ್ಯ ಶಂಕರ್ ಕುಲಾಲ ಅವರು, ನಮ್ಮ ಯೋಚನೆ ಆಲೋಚನೆ ಚೆನ್ನಾಗಿ ಇರಬೇಕು. ಮಕ್ಕಳಿಗೆ ವಿದ್ಯೆ ಒಟ್ಟಿಗೆ ಸಂಸ್ಕಾರ ನೀಡಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯೋಜನಾಧಿಕಾರಿ ರಾಮ ಎಂ ಅವರು, ಯೋಜನೆಯ ಬಡ್ಡಿ ದರ, ಯೋಜನೆ ಕಾರ್ಯಕ್ರಮ, ಪದಗ್ರಹಣ ಕಾರ್ಯಕ್ರಮದ ಉದ್ದೇಶ, ಜವಾಬ್ದಾರಿ, ಸಂಘ ನಿರ್ವಹಣೆಯಲ್ಲಿ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು.

ನಗರಸಭೆ ಸದಸ್ಯೆ ವಿಜಯಲಕ್ಷ್ಮಿ, ಪ್ರಗತಿಬಂಧು ಸ್ವಸಹಾಯ ಸಂಘ ಒಕ್ಕೂಟದ ಉಡುಪಿ ತಾಲ್ಲೂಕಿ‌ನ ಅಧ್ಯಕ್ಷೆ ಶಮಿತಾ ಶೆಟ್ಟಿ, ಜಿಲ್ಲಾ ಜನಜಾಗೃತಿ ಸದಸ್ಯ ಶಿವಕುಮಾರ್ ಅಂಬಲಪಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ತಾಲ್ಲೂಕು ಜಾಗೃತಿ ಸದಸ್ಯ ಕುಶಾಲ್ ಶೆಟ್ಟಿ ಉಪಸ್ಥಿತರಿದ್ದರು. ವಲಯ ಅಧ್ಯಕ್ಷ ಚಂದ್ರಶೇಖರ ನಾಯ್ಕ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಮೇಲ್ವಿಚಾರಕಿ ಮಂಜುಳಾ ವಲಯದ ವರದಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಇ ಶ್ರಮ್ ಕಾರ್ಡ್ ಮತ್ತು ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಲಾಯಿತು. ದಮಯಂತಿ ಸ್ವಾಗತಿಸಿದರು. ಸೇವಾಪ್ರತಿನಿಧಿ ಶುಭವತಿ ವಂದಿಸಿದರು. ಕೃಷಿ ಅಧಿಕಾರಿ ಬಾಲಚಂದ್ರ ಕಾರ್ಯಕ್ರಮದ ನಿರೂಪಿಸಿದರು.