ಮಲ್ಪೆ: ಮನೆ ಬಿಟ್ಟು ಬಂದಿರುವ ಅಪ್ರಾಪ್ತ ಬಾಲಕಿಯರ ರಕ್ಷಣೆ

ಉಡುಪಿ: ಅಪ್ರಾಪ್ತ ಪ್ರಾಯದ ಇರ್ವರು ಬಾಲಕಿಯರನ್ನು ರಕ್ಷಿಸಿರುವ ಘಟನೆ ಮಲ್ಪೆ ಬೀಚಿನಲ್ಲಿ ಶುಕ್ರವಾರ ನಡೆದಿದೆ. ರಕ್ಷಿಸಲ್ಪಟ್ಟಿರುವ ಮಕ್ಕಳು ಹಾವೇರಿಯವರೆಂದು ತಿಳಿದುಬಂದಿದೆ. ವಿದ್ಯಾಭ್ಯಾಸ ಮುಂದುವರಿಸುವ ಆಸಕ್ತಿ ಹೊಂದಿದ್ದೇವೆ, ಪೋಷಕರಿಲ್ಲದೆ ಅಸಹಾಯಕರಾದೆವು. ಕಲಿಯುವ ಉದ್ದೇಶಕ್ಕಾಗಿ ಹಣ ಕ್ರೋಢೀಕರಿಸಲು, ಹಾವೇರಿಯಿಂದ ಉಡುಪಿಗೆ ಭಿಕ್ಷೆಯಾಚಿಸಲು ಬಂದಿರುವುದಾಗಿ ಮಕ್ಕಳು ಹೇಳಿಕೊಂಡಿದ್ದಾರೆ.

Oplus_131072
ಬೀಚಿನಲ್ಲಿ ವಿಹರಿಸುತ್ತಿದ್ದ ಇರ್ವರು ಬಾಲಕಿಯರ ಚಲನವಲನದಲ್ಲಿ ಸಂಶಯಗೊಂಡು ವಿಚಾರಿಸಿದಾಗ, ಬೀಚ್ ಗಸ್ತು ಸಿಬ್ಬಂದಿ ಸುರೇಶ್ ಅಂಚನ್ ಅವರಿಗೆ, ಬಾಲಕಿಯರು ಮನೆಬಿಟ್ಟು ಬಂದಿರುವುದು ಗೊತ್ತಾಗಿದೆ. ತಕ್ಷಣ ಅವರು ಅಪ್ರಾಪ್ತ ಬಾಲಕಿಯರ ರಕ್ಷಣೆಗೈಯಲು ಸಮಾಜಸೇವಕ ನಿತ್ಯಾನಂದ ಒಳಕಾಡುವರಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಒಳಕಾಡುರವರು ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಕ್ಕಳ ರಕ್ಷಣಾ ಘಟಕಕ್ಕೆ ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ. 

ನಂತರ ನಗರ ಮಹಿಳಾ ಪೋಲಿಸ್ ಠಾಣೆಯ ಪಿ.ಎಸ್.ಐ ಪ್ರೇಮನ್ ಗೌಡ ಪಾಟೀಲ್, ಕಾನ್ಸ್ಟೇಬಲ್ ಮಹದೇವ್ ಅವರೊಂದಿಗೆ ಒಳಕಾಡುವರು ಬೀಚಿಗೆ ಬಂದು ಮಕ್ಕಳನ್ನು ರಕ್ಷಿಸಿದ್ದಾರೆ. ತರುವಾಯ ಕಲ್ಯಾಣ ಸಮಿತಿಯ ಆದೇಶದಂತೆ ರಕ್ಷಿಸಲ್ಪಟ್ಟ ಅಪ್ರಾಪ್ತ ಮಕ್ಕಳನ್ನು ನಿಟ್ಟೂರಿನ ಬಾಲಕಿಯರ ಬಾಲಭವನದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಈ ಸಂದರ್ಭ ಮಕ್ಕಳ ರಕ್ಷಣಾ ಘಟಕದ ಮಹೇಶ್ ಇದ್ದರು.