ಉಡುಪಿ: ಮುಂಬಯಿ ಮತ್ತು ಮಂಗಳೂರು ನಡುವೆ ಕಳೆದ ಮೂರು ದಶಕಗಳಿಂದ ಸಂಚರಿ ಸುತ್ತಿರುವ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿಗೆ ಕಳೆದ ತಿಂಗಳು ಅಳವಡಿಸಿದ ಅತ್ಯಾಧುನಿಕ ಎಲ್ಎಚ್ಬಿ ಕೋಚ್ಗಳು ಕಳಪೆಯಾಗಿದ್ದು, ಅವುಗಳಲ್ಲಿರುವ ಲೋಪಗಳ ಕುರಿತು ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣರನ್ನು ಭೇಟಿ ಮಾಡಿದ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೋಚ್ಗಳಲ್ಲಿರುವ ಲೋಪಗಳನ್ನು ಕೂಡಲೇ ಸರಿಪಡಿಸುವಂತೆ ಮನವಿ ಅರ್ಪಿಸಿ ಒತ್ತಾಯಿಸಿದರು.
ಮತ್ಸ್ಯಗಂಧ ರೈಲಿಗೆ 2024ರಲ್ಲಿ ತಯಾರಾದ ಹೊಸ ಎಲ್ಎಚ್ಬಿ ಕೋಚ್ಗಳ ಜೊತೆಗೆ 2020ರಲ್ಲಿ ತಯಾರಾದ ಹಳೆಯ ಎಲ್ಎಚ್ಬಿ ಕೋಚ್ಗಳನ್ನು ಸೇರಿಸಿದ ಇಲಾಖೆಯ ಕಾರ್ಯವನ್ನು ಸಚಿವರ ಗಮನಕ್ಕೆ ತಂದು ಅವುಗಳನ್ನು ಕೂಡಲೇ ಬದಲಿಸುವಂತೆ ಆಗ್ರಹಿಸಿದ್ದಾರೆ.
ಮತ್ಸ್ಯಗಂಧ ರೈಲಿನ ಎಲ್ಲಾ ಟ್ರಿಪ್ಗಳಲ್ಲೂ ಯಾವುದೇ ದೂರುಗಳು ಬಾರದಂತೆ 2024ರಲ್ಲೇ ತಯಾ ರಾದ ಉತ್ತಮ ಕೋಚ್ಗಳನ್ನೇ ಬಳಸುವಂತೆ ಸಂಬಂಧಿಸಿದ ಜೋನಲ್ ರೈಲ್ವೇಗಳಿಗೆ ತಿಳಿಸಲು ಕೋರಿದ್ದು, ಸಚಿವರಿಂದ ಈ ಬಗ್ಗೆ ಸಕಾರತ್ಮಕ ಪ್ರತಿಕ್ರಿಯೆ ಲಭಿಸಿದೆ ಎಂದು ಸಂಸದರು ತಿಳಿಸಿದ್ದಾರೆ.ಕರಾವಳಿ ಹಾಗೂ ಮುಂಬಯಿ ನಗರಗಳನ್ನು ಬೆಸೆಯುವ ಪ್ರತಿಷ್ಟಿತ ಮತ್ಸ್ಯಗಂಧ ರೈಲು ಎಲ್ಎಚ್ಬಿ ಕೋಚುಗಳೊಂದಿಗೆ ಕಳೆದ ಫೆೆಬ್ರವರಿ 17ರಿಂದ ಮೇಲ್ದರ್ಜೆಗೇರಿದ್ದು ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣದ ಭರವಸೆ ನೀಡಿದೆ.
ಆದರೆ ಮತ್ಸ್ಯಗಂಧ ರೈಲಿನ ಎರಡೂ ರೇಕುಗಳ ಜೊತೆ ಮಂಗಳೂರು ಮತ್ತು ಕೇರಳದ ತಿರುವನಂತ ಪುರಂ ನಡುವೆ ಓಡುವ ಇನ್ನೊಂದು ರೈಲಿನ ರೇಕುಗಳ ಹೊಂದಾಣಿಕೆ ವ್ಯವಸ್ಥೆ ಇದ್ದು, ಈ ರೈಲಿನ ಎರಡು ರೇಕೂಗಳೂ ಸೇರಿ 2024 ರ ಎರಡು ಹೊಸ ರೇಕುಗಳ ಜತೆ ಮತ್ತೆರಡು 2020ರ ಹಳೇ ರೇಕುಗಳೂ ಸೇರಿಕೊಂಡ ಕಾರಣ, ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿನ ಕೆಲವು ಪ್ರಯಾಣದ ವೇಳೆ ಹಳೆಯ ಎಲ್ಎಚ್ಬಿ ರೇಕುಗಳು ಸೇರುವುದು ಗಮನಕ್ಕೆ ಬಂದಿದ್ದು; ಈ ಹಿನ್ನೆಲೆಯಲ್ಲಿ ಬೇರೆ ಬೇರೆ ಸಾಮಾಜಿಕ ಜಾಲತಾಣ ಗಳಲ್ಲಿ ಹಳೆಯ ಕೋಚುಗಳ ಸಮಸ್ಯೆಗಳ ಬಗ್ಗೆ ಬಂದ ದೂರುಗಳು ಸಂಸದರಿಗೆ ತಲುಪಿದ್ದವು.ಈಗಾಗಲೇ ಅಧಿಕಾರಿಗಳಿಗೆ ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ತಿಳಿಸಲಾಗಿದೆ.
ಮಂಗಳೂರು ಮುಂಬಯಿ ನಡುವೆ ಓಡುವ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿಗೆ ಉತ್ತಮ ಕೋಚುಗಳನ್ನಷ್ಟೇ ಜೋಡಿಸಲು ತಿಳಿಸಿದ್ದು, ಹಳೆಯ ಕೋಚುಗಳನ್ನು ಅಳವಡಿಸುವ ಪದ್ದತಿಗೆ ಮತ್ತು ಹೊಸ ಹಾಗು ಹಳೇ ಕೋಚುಗಳ ಮಿಶ್ರಣ ಮಾಡಿ ಓಡಿಸುವ ಪದ್ದತಿಯನ್ನು ಅನುಸರಿಸದಂತೆ ಸಚಿವರಿಗೆ ಸಂಸದರು ಮನವಿ ಮಾಡಿದ್ದಾರೆ.
ಸಚಿವರು ಈ ಬಗ್ಗೆ ಮತ್ಸ್ಯಗಂಧ ರೈಲಿನ ಮೂಲ ವಲಯವಾದ ದಕ್ಷಿಣ ರೈಲ್ವೇಗೆ ತಕ್ಷಣವೇ ಈ ಸಮಸ್ಯೆ ಪರಿಹರಿಸಲು ಸೂಚನೆ ನೀಡಿದ್ದಾರೆ ಎಂದು ಸಂಸದರ ಪತ್ರಿಕಾ ಪ್ರಕಟಣೆ ತಿಳಿಸಿದೆ.












