ಮಣಿಪಾಲ: ಹೊಟೇಲ್‌ ಮ್ಯಾನೇಜರ್‌ಗೆ ವಂಚನೆ; ಲಕ್ಷಾಂತರ ರೂ.ನಗದಿನೊಂದಿಗೆ ವೈಟರ್‌ ಪರಾರಿ.

ಮಣಿಪಾಲ: ಮಣಿಪಾಲದ ಈಶ್ವರನಗರದ ಹೊಟೇಲ್‌ವೊಂದರಲ್ಲಿ ಮ್ಯಾನೇಜರ್‌ಗೆ ವಂಚಿಸಿದ ವೈಟರ್‌ ಲಕ್ಷಾಂತರ ರೂ.ನಗದಿನೊಂದಿಗೆ ಪರಾರಿಯಾದ ಘಟನೆ ನಡೆದಿದೆ.

ವಂಚನೆಗೊಳಗಾದ ವ್ಯಕ್ತಿ ಹೋಟೆಲ್ ಮ್ಯಾನೇಜರ್‌ ಆಗಿ ಕೆಲಸ ನಿರ್ವಹಿಸುತ್ತಿರುವ ಗಿರೀಶ್‌. ಗಿರೀಶ್ ಅವರ ಹೊಟೇಲ್‌ನಲ್ಲಿ ವೈಟರ್‌ ಆಗಿ ಕೆಲಸ ಮಾಡಿಕೊಂಡಿದ್ದ ಜಯಮೋಹನ್‌ ಸೋಮೇಶ್‌ ಎಂಬಾತ ಗಿರೀಶ್‌ ಅವರೊಂದಿಗೆ ವಾಸವಾಗಿದ್ದನು. ಸೆ.29ರಂದು ಗಿರೀಶ್‌ ಅವರು ಕೆಲಸ ಮುಗಿಸಿ ರೂಮಿಗೆ ಬಂದು 26,650 ರೂ.ನಗದು ಹಾಗೂ 10,000 ರೂ.ಬೆಲೆಬಾಳುವ ವಿವೋ ವೈ 18 ಮಾದರಿಯ ಮೊಬೈಲ್‌ ಫೋನ್‌ ಅನ್ನು ತನ್ನ ರೂಮಿನ ಡ್ರಾವರ್‌ನಲ್ಲಿಟ್ಟು ಮಲಗಿದ್ದರು. ಮರುದಿನ ಬೆಳಗ್ಗೆ ನೋಡಿದಾಗ ಜಯಮೋಹನ್‌ ಸ್ಥಳದಲ್ಲಿರಲಿಲ್ಲ. ಡ್ರಾವರ್‌ನಲ್ಲಿಟ್ಟಿದ್ದ ನಗದು, ಮೊಬೈಲ್‌ ಹಾಗೂ ಕೆಲಸ ಮಾಡಿಕೊಂಡಿರುವ ಹೊಟೇಲ್‌ ಹೆಸರಿನಲ್ಲಿರುವ ಎಚ್‌ಡಿಎಫ್ಸಿ ಖಾತೆಯಿಂದ 81,000ರೂ.ಗಳನ್ನು ಗೂಗಲ್‌ ಪೇ ಮೂಲಕ ಆರೋಪಿ ತನ್ನ ಖಾತೆಗೆ ವರ್ಗಾಯಿಸಿಕೊಂಡು ಹೋಗಿದ್ದಾನೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.