ಬೆಂಗಳೂರು: ಹೆಚ್ಎಸ್ಆರ್ ಲೇಔಟ್ನ ಮನೆಯಲ್ಲಿ ಸಂಜೆ 4 ಗಂಟೆ ಸುಮಾರಿಗೆ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ (68) ಬರ್ಬರ ಕೊಲೆಯಾಗಿದೆ.
ಪತ್ನಿ ಪಲ್ಲವಿ ಅವರೇ ಓಂ ಪ್ರಕಾಶ್ಗೆ ಚಾಕುವಿನಿಂದ 8-10 ಬಾರಿ ಎದೆ, ಹೊಟ್ಟೆ ಭಾಗಕ್ಕೆ ಇರಿದು ಕೊಂದಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ, ಸುಮಾರು 10-15 ನಿಮಿಷ ರಕ್ತದ ಮಡುವಿನಲ್ಲಿ ಓಂ ಪ್ರಕಾಶ್ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಈ ವೇಳೆ ಗಂಡನ ನರಳಾಟ ನೋಡುತ್ತಾ ಪತ್ನಿ ನಿಂತಿದ್ದರು. ಕೆಳಗಿನ ಮಹಡಿಯ ಹಾಲ್ ಸಂಪೂರ್ಣ ರಕ್ತಸಿಕ್ತವಾಗಿತ್ತು. ಸ್ಥಳ ಮಹಜರು ನಡೆಸಿದ ಪೊಲೀಸರು, ಪತ್ನಿ ಪಲ್ಲವಿ, ಮಗಳನ್ನು ವಶಕ್ಕೆ ಪಡೆದಿದ್ದು, ಸ್ಥಳದಲ್ಲೇ ಇದ್ದ ಚಾಕು ಕೂಡ ಸೀಜ್ ಮಾಡಲಾಗಿದೆ.
ಸೊಸೆ, ಮಗ ಊಟಕ್ಕೆ ಹೊರಗಡೆ ಹೋದಾಗ ತಾಯಿ ಪಲ್ಲವಿ, ಮಗಳು ಕೃತಿಕಾ ಜೊತೆ ಸೇರಿ ಕೊಂದಿದ್ದಾರೆ. ಘಟನೆ ಬೆನ್ನಲ್ಲೇ ಡಿಜಿ ಅಲೋಕ್ಮೋಹನ್, ಬೆಂಗಳೂರು ಕಮಿಷನರ್ ದಯಾನಂದ್ ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಓಂ ಪ್ರಕಾಶ್ ದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಹಾರದ ಚಂಪಾರಣ್ ಮೂಲದ ಓಂ ಪ್ರಕಾಶ್ 1981ನೇ ಕೇಡರ್ನ ಐಪಿಎಸ್ ಅಧಿಕಾರಿ, ರಾಷ್ಟ್ರಪತಿಗಳ ಪದಕ ಪಡೆದಿದ್ದರು. 2015ರಲ್ಲಿ 3 ವರ್ಷ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿದ್ದರು.












