ನಿರ್ಮಲ ಪರಿಶುದ್ಧ ತತ್ತ್ವ ಸಾರುವ ರಮ್ಜಾನ್

ನಮ್ಮದು ಭರತ ಭೂಮಿ, ಹಲ ಕೆಲವು ಸಂಸ್ಕೃತಿಗಳ ಹಾಗೂ ಶಾಂತಿ ಸೌಹಾರ್ದತೆಗಳ ಬೀಡು. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ್, ಸಿಖ್ ಹಲವು ಪಂಗಡಗಳ ತವರೂರು. ಅಂತೆಯೇ ರಸ ಋಷಿ ಕುವೆಂಪು ನಮ್ಮ ಭಾರತವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಭಾವದುಂಬಿ

ನಮ್ಮದು ಭರತ ಭೂಮಿ, ಹಲ ಕೆಲವು ಸಂಸ್ಕೃತಿಗಳ ಹಾಗೂ ಶಾಂತಿ ಸೌಹಾರ್ದತೆಗಳ ಬೀಡು. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ್, ಸಿಖ್ ಹಲವು ಪಂಗಡಗಳ ತವರೂರು. ಅಂತೆಯೇ ರಸ ಋಷಿ ಕುವೆಂಪು ನಮ್ಮ ಭಾರತವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಭಾವದುಂಬಿ ಅಪ್ಪಿಕೊಂಡಿದ್ದಾರೆ.

ದೇಶದೆಲ್ಲೆಡೆ ಇಂದು ಇಸ್ಲಾಂ ಸಮುದಾಯದ ಬಂಧುಗಳಿಗೆ ಪವಿತ್ರ ದಿನ, ‘ರಮ್ಜಾನ್’ ಹಬ್ಬ ದ ಸಂಭ್ರಮದಲ್ಲಿರುವ ಬಾಂಧವರಿಗೆ ಸೌಹಾರ್ದತೆ ಪ್ರತೀಕವಾಗಿ ಶುಭಾಶಯಗಳನ್ನು ಈ ನುಡಿ ಸಂದೇಶ ಮೂಲಕ ವಿನಿಮಯ ಮಾಡಿಕೊಳ್ಳುತ್ತಿರುವೆ.

ದೇವನೊಬ್ಬ ನಾಮ ಹಲವು, ಆಚರಿಸುವ ಪೂಜಿಸುವ ಪದ್ಧತಿ ಬೇರೆ ಆದರೂ ಎಲ್ಲರ ಗುರಿಯೂ ಒಂದೇ. ಸಕಲ ಜೀವಾತ್ಮರಿಗೂ ಲೇಸನೇ ಬಯಸುವ ‘ಓ ಅಲ್ಲಾಹನೇ, ನನ್ನನ್ನೂ ಸೇರಿದಂತೆ ಅರಿತೋ ಅರಿಯದೆಯೋ ಮಾಡುವ ತಪ್ಪುಗಳನ್ನು ಮನ್ನಿಸು, ಎಲ್ಲರಿಗೂ ಒಳಿತನ್ನೇ ಮಾಡು. ದಯೇ, ಧರ್ಮ, ದಾನದ ಮೂಲಕ ಶಾಂತಿ, ಸಮೃದ್ಧಿ ವಾತಾವರಣ ನಿರ್ಮಾಣ ಮಾಡು ’ಎನ್ನುವ ಬೇಡಿಕೆಯನ್ನು ದೇವರಲ್ಲಿ ಅರಿಕೆ ಮಾಡುವ ವಿಧಿ ವಿಧಾನವೇ ಈ ರಮ್ಜಾನ್ ಹಬ್ಬದ ವೈಶಿಷ್ಟ್ಯ.

‘ರಮ್ಜಾನ್’ಎಂದರೆ ಅರಬ್ಬಿ ಭಾಷೆಯಲ್ಲಿ ಸುಡುವುದು ಎಂದು. ಏನು ಸುಡುವುದು? ಪಾಪ ಕರ್ಮ, ದ್ವೇಷ ಹಾಗೂ ದೋಷಗಳನ್ನು ಸುಡುವುದು. ಈ ಹಬ್ಬವೇ ಒಂದು ವೈಶಿಷ್ಟ್ಯತೆಯ ಪ್ರತೀಕ ವಾಗಿದೆ. ರೋಜಾ ಮತ್ತು ಜಕಾತ್ ಈ ಹಬ್ಬದ ವಿಶೇಷತೆ. ‘ಜಕಾತ್’. ಅಂದರೆ ದಾನ(ದಾಸೋಹ). ಶರಣರು ಹೇಳಿದಂತೆ ಕಾಯಕ ದಾಸೋಹ ಮಾಡಲೇಬೇಕು. ಹೀಗೆ ಗುರು, ಲಿಂಗ, ಜಂಗಮರಿಗೂ ಕಾಯಕದ ಪರಿಕಲ್ಪನೆ ನೀಡಿ ಕಾಯಕದಿಂದ ಬಂದ ಹಣವನ್ನು ದಾಸೋಹ ಮಾಡುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ ಎಂಬ ಸಂದೇಶವನ್ನು ಬಸವಣ್ಣನವರು ನೀಡಿದರು.

ಇಸ್ಲಾಂ ಧರ್ಮೀಯರೂ ‘ರಮ್ಜಾನ್ ’ ಮಾಸದಲ್ಲಿ ಬಡವರಿಗೆ, ದೀನ ದುರ್ಬಲರಿಗೆ ಕಡ್ಡಾಯವಾಗಿ ದಾನ ಮಾಡಲೇಬೇಕು. ಕಾಯಕದಿಂದ ಸಂಪಾದಿಸಿರುವುದನ್ನು ದಾನ ಮಾಡಿ ಪವಿತ್ರನಾಗು ಎನ್ನು ವುದು ಕುರಾನ್ ಗ್ರಂಥದ ಸಂದೇಶವಾಗಿದೆ. ಯಾಂತ್ರಿಕ ಬದುಕು ಸಾಗಿಸುವ ವೇಳೆ ಅನಿರೀಕ್ಷಿ ತವಾಗಿ ಬಂದೊದಗುವ ದುಃಖದಿಂದ ಪಾರಾಗಲು ಈ ಪವಿತ್ರ ಮಾಸವನ್ನೇ ಇಸ್ಲಾಂ ಧರ್ಮೀಯರು ಹೇಳಿದ್ದಾರೆ. ನಿರಂತರ ಒಂದು ತಿಂಗಳು ಕಾಲ ಉಪವಾಸ ಕ್ರಮ ಕಡ್ಡಾಯ ಅನುಸರಿಸರಿಸಬೇಕು. ‘ಉಪ ’ ಎಂದರೆ ಹತ್ತಿರ. ‘ವಾಸ ’ ಎಂದರೆ ಇರುವುದು. ದೇವರನ್ನು ಆರಾಧಿಸುವ ಮೂಲಕ ದೇವರಿಗೆ (ಅಲ್ಲಾನಿಗೆ)ಹತ್ತಿರವಾಗುವುದು. ದೇವ ನಾಮಸ್ಮರಣೆಯನ್ನು ಉಪವಾಸ ಕೈಗೊಂಡು ದೇಹಕ್ಕೆ ಮತ್ತು ಮನಸ್ಸಿಗೆ ನೆಮ್ಮದಿಯನ್ನು ಕಂಡುಕೊಳ್ಳುವುದೇ ಈ ಮಾಸದ ವೈಶಿಷ್ಟ್ಯ.

ಧರ್ಮದ ಗುರುಗಳ ಪ್ರಕಾರ ರಮ್ಜಾನ ಮಾಸದ 26 ನೇ ದಿನ ‘ಪವಿತ್ರ ರಾತ್ರಿ’. ಅಂದು ಸ್ವತಃ ದೇವರೇ(ಅಲ್ಲಾಹನೇ) ದೇವ ದೂತರ ರೂಪದಲ್ಲಿ ಧರೆಗಳಿದು ಬರುತ್ತಾನೆ. ಈ ಕಾರಣಕ್ಕೆ ಇಡೀ ರಾತ್ರಿ ಆತನಲ್ಲಿ ಅನನ್ಯ ಭಕ್ತಿ ಭಾವಗಳಿಂದ ಪ್ರಾರ್ಥನೆ ರೂಪದಲ್ಲಿ ಇಷ್ಟಾರ್ಥಗಳನ್ನು ಅರಿಕೆ ಮಾಡಿಕೊಳ್ಳುತ್ತಾರೆ ಹಾಗೂ ದೇವರು ನನ್ನ ಮೊರೆ ಆಲಿಸಿದ ಎಂದು ಸಂಭ್ರಮಿಸಿ ನೆಮ್ಮದಿ ಕಾಣುತ್ತಾರೆ.

ರಮ್ಜಾನ ಹಬ್ಬದಲ್ಲಿ ರೋಜಾ ಆಚರಿಸುವುದು ಅಲ್ಲಾಹನ ಪ್ರೀತಿ, ಪ್ರೇಮ ಸಂಪಾದಿಸಲು ಇರುವ ಏಕೈಕ ಮಾರ್ಗವೆಂದು ನಂಬಿದ್ದಾರೆ. ಈ ಕಾರಣಕ್ಕಾಗಿಯೇ ಬೆಳಗ್ಗೆ ಯೋಗ, ಪ್ರಾಣಾಯಾಮವನ್ನು ನಿತ್ಯ 5 ಸಲ ನಮಾಜ್ ರೂಪದಲ್ಲಿ ಕೈಗೊಂಡು. ಧಾರ್ಮಿಕ ಹಾಗೂ ವೈಜ್ಞಾ ನಿಕ ತಳಹದಿಯ ಮೇಲೆ ದೈಹಿಕ ಜತೆಗೆ ಮಾನಸಿಕ ಆತ್ಮಶುದ್ಧಿ ಮಾಡಿಕೊಂಡು ನೆಮ್ಮದಿ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ.

ನಾವು ಶಿವಯೋಗಮಂದಿರದಲ್ಲಿ ಹಾನಗಲ್ಲ ಶ್ರೀಗಳ ಚರಿತ್ರೆ ಓದುವಾಗ ‘ಪಂ.ಪಂಚಾಕ್ಷರಿ ಗವಾಯಿಗಳು ಮೈಸೂರಿನಲ್ಲಿ ಓದುವಾಗ ಅವರಿಗೆ ಸಂಗೀತ ಗುರುಗಳಾಗಿದ್ದವರು ಅಬ್ದುಲ್ ವಹೀದ್‌ಖಾನ ಎಂಬುವರು. ಇವರು ನಿತ್ಯ ಐದು ಬಾರಿ ನಮಾಜ್ ಮಾಡುವುದನ್ನು ನೋಡಿ ಬೇಸರಗೊಂಡ ವಿದ್ಯಾರ್ಥಿ ಪಂಚಾಕ್ಷರಿಗೆ ಕುಮಾರ ಶ್ರೀಗಳು ಹತ್ತಿರ ಕರೆದು ಹೇಳಿದ್ದು, ಅಲ್ಲಾ ಎಂಬುವನೇ ಅಲ್ಲಮ, ರಾಮ ಎಂಬುವನೇ ರಹೀಮ ಮುರ್ತುಜಾ ಎಂಬುವನೇ ಮೃತ್ಯುಂಜಯ, ಸಯ್ಯದ್ ಎಂಬುವನೇ ಸದಾಶಿವ, ಚಾಂದಬಾಷಾ ಎಂಬುವನೇ ಚನ್ನಬಸವ ಹಾಗೂ ಫಾತೀಮಾ ಎಂಬುವಳೇ ಪಾರ್ವತಿ’ ಯಾಕೀ ಬೇಧ ಭಾವ ?. ಜಾತಿಭೇದ ಮಾಡದೇ ವಿದ್ಯೆ ಕಲಿತು ಮುಂದೆ ಎಲ್ಲ ಜಾತಿ, ಧರ್ಮೀಯರಿಗೂ ಸಂಗೀತ ಶಿಕ್ಷಣ ನೀಡುವ ಎಂದು ಬುದ್ಧಿವಾದ ಹೇಳಿ ಹರಿಸಿದರಂತೆ.

ಅಂದು ಗುರುಗಳ ನುಡಿಯನ್ನು ಅತ್ಯಂತ ನಿಷ್ಠೆಯಿಂದ ಅನುಸರಿಸಿದ ಪರಿಣಾಮ ಮುಂದೆ ವೀರೇಶ್ವರ ಪುಣ್ಯಾಶ್ರಮ ಪುಟ್ಟರಾಜರ ಮಾತೃತ್ವ ಪ್ರೇಮದ ಪ್ರತೀಕವಾಗಿ ಅನೇಕ ಮುಸ್ಲಿಂ ಕಲಾವಿದರನ್ನು ಸಂಗೀತ ಲೋಕಕ್ಕೆ ಪರಿಚಯಿಸುವ ಮೂಲಕ ಸಮತಾವಾದದ ಪ್ರತಿಬಿಂಬವಾದರು.

ಕುರಾನ್ ಸಂದೇಶದಲ್ಲಿ ಬರುವಂತೆ ‘ಕುಲ್‌ಹು ಅಲ್ಲಾಹು ಅಹದ್ ಅಲ್ಲಾಹು ಸ್ವಮದ್ ಲಮ್ ಯಲಿದ್ ಏಲಂ ಮೇ ಯಲಿದ್ ಏಲಂ ಯಕುಲ್‌ಲಹು ಉಫನ್ ಅಹದ್ ’ ಸರ್ವಶಕ್ತನಾದ ನಿರಾಕಾರ ನಿರವಯವ ನಿತ್ಯ ತೃಪ್ತನಾದ ಸರ್ವೇಶ್ವರನೇ ತಾನಾದ ಆ ದೇವರೇ (ಅಲ್ಲಾ)ನೀನೇ ನಮಗೆ ಸರ್ವಸ್ವ ಎನ್ನುವ ವಿನೀತ ಭಾವ ಕುರಾನ್ ಸಂದೇಶವಾಗಿದೆ.

ಜಗತ್ತಿಗೇ ದಿವ್ಯ ಸಂದೇಶ ಸಾರುವ ರಮ್ಜಾನ್ ಹಾಗೂ ಶ್ರಾವಣದ ವಿಶೇಷ ಆಚರಣೆಯನ್ನು ಕೂಡಿ ಆಚರಿಸೋಣ, ಕೂಡಿ ನಡೆಯೋಣ, ಬಾಳೋಣ ಜತೆಗೆ ಕೂಡಿ ಉಣ್ಣೋಣ. ಇವನಾರವ ಎಂದೆನಿಸದೇ ಇವ ನಮ್ಮವ ಮನೆಯ ಮಗನೆಂದೆನಿಸಯ್ಯ ಎಂದು ಪ್ರಾರ್ಥಿಸುವ ಮೂಲಕ ಸ್ವಸ್ಥ ಸಮಾಜ ಕಟ್ಟೋಣ, ಭಾವೈಕ್ಯತೆಯ ಬೆಳದಿಂಗಳ ಬೆಳಗಿಸೋಣ.