ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯಲ್ಲಿ ಕಂಪ್ಯೂಟೇಷನಲ್ ಇಂಟೆಲಿಜೆನ್ಸ್ ಮತ್ತು ಸ್ಮಾರ್ಟ್ ಕಮ್ಯುನಿಕೇಷನ್ (ಸಿಐಎಸ್ಸಿ-2024) ಮತ್ತು ಮೆಟೀರಿಯಲ್, ಎನರ್ಜಿ, ಎನ್ವಿರಾನ್ಮೆಂಟ್ ಮತ್ತು ಮ್ಯಾನ್ಯುಫಾಕ್ಚ್ಚರಿಂಗ್ (ಎಮ್ಇಇಎಮ್ಎಸ್ –2024) ಎಂಬ ವಿಷಯದ ಕುರಿತು ಪ್ರತಿಷ್ಠಿತ ಅಂತರಾಷ್ಟ್ರೀಯ ಸಮ್ಮೇಳನ ಮತ್ತು ವಿದ್ಯಾರ್ಥಿ ವಿಚಾರ ಸಂಕಿರಣವನ್ನು ದಿನಾಂಕ 20 ಮತ್ತು 21 ಡಿಸೆಂಬರ್ 2024 ರಂದು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು.
ಈ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟಿಯಲ್ ರಿಸರ್ಚ್, ಬೆಂಗಳೂರು ಇಲ್ಲಿನ ಹಿರಿಯ ವಿಜ್ಞಾನಿಗಳಾದ ಡಾ. ಕೃಷ್ಣ ಚಂದ್ರ ಗೌಡ ಇವರು ದೀಪ ಬೆಳಗಿಸುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದರು.
ಇವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಜಾಗತಿಕ ಸವಾಲುಗಳಾದ ಸುಸ್ಥಿರತೆ, ಇಂಧನ ದಕ್ಷತೆ ಮತ್ತು ತಾಂತ್ರಿಕ ಆವಿಷ್ಕಾರಗಳನ್ನು ಎದುರಿಸುವಲ್ಲಿ ಸಮ್ಮೇಳನಗಳ ಮಹತ್ವವನ್ನು ಒತ್ತಿ ಹೇಳಿದರು. ಇಂತಹ ಸಮ್ಮೇಳನಗಳು ಪ್ರಭಾವಶಾಲಿಯಾದ ಸಂಶೋಧನೆಗಳನ್ನು ಪ್ರೇರೇಪಿಸಿ, ಅರ್ಥಪೂರ್ಣ ಪರಿಹಾರಗಳನ್ನು ನೀಡುವುದಾಗಿ ಹೇಳಿದರು.
ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ ಇವರು ಸಮಾರಂಭದ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ಇಂತಹ ಅಂತರಾಷ್ಟ್ರೀಯ ಸಮ್ಮೇಳನಗಳು ನುರಿತ ತಜ್ಙರು, ಸಂಶೋಧಕರು ಮತ್ತು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಮೂಲಕ ಹೊಸ ತಂತ್ರಜ್ಞಾನ ಆವಿಷ್ಕಾರಗಳಿಗೆ ನಾಂದಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸಮ್ಮೇಳನದ ಕಿರುಪುಸ್ತಕವನ್ನು ಮುಖ್ಯ ಅತಿಥಿಗಳು ಬಿಡುಗಡೆಗೊಳಿಸಿದರು. ಸಂಸ್ಥೆಯ ಪ್ರಾಂಶುಪಾಲರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಮ್ಮೇಳನದ ಮಾಹಿತಿ ನೀಡಿ ಭಾಗವಹಿಸಿದ ಎಲ್ಲರಿಗೂ ಶುಭ ಹಾರೈಸಿದರು.
ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕರಾದ ಡಾ. ಮಂಜುನಾಥ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಡಾ. ಭಾರತಿ ಪಂಜ್ವಾನಿ ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು. ಶ್ರೀಮತಿ ಸೌಮ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.