ಉಡುಪಿ: ರಾಜ್ಯದ ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆ, ಉಡುಪಿ ಜಿಲ್ಲೆಯಲ್ಲಿ ಕೋಳಿ ಫಾರಂಗಳ ಮತ್ತು ಮಾಂಸದ ಅಂಗಡಿಗಳ ಮೇಲೆ ನಿಗಾ ಇಡಲು ಆರೋಗ ಮತ್ತು ಪಶು ಸಂಗೋಪನೆ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳನ್ನು ನಿರ್ವಹಿಸಲು ಸಾರ್ವಜನಿಕರಲ್ಲಿ ಜಾಗತಿ ಮೂಡಿಸಲು ಸೂಚಿಸಿದೆ.
ಜಿಲ್ಲೆಯಲ್ಲಿ 334 ಮಾಂಸದ (ಬಾಯ್ಲರ್) ಕೋಳಿ ಫಾರಂಗಳಲ್ಲಿ 12.50 ಲಕ್ಷ ಕೋಳಿಗಳು, ಒಂದು ಮೊಟ್ಟೆ (ಲೇಯರ್) ಕೋಳಿ ಫಾರಂನಲ್ಲಿ 35,000 ಕೋಳಿಗಳು ಹಾಗೂ 2.50 ಲಕ್ಷ ಹಿತ್ತಲ ಕೋಳಿಗಳು ಇರುತ್ತವೆ. ಹಕ್ಕಿಜ್ವರದ ಯಾವುದೇ ಪ್ರಕರಣಗಳು ವರದಿಯಾಗಿರುವುದಿಲ್ಲ. ಹಕ್ಕಿಜ್ವರವು (ಹಕ್ಕಿಗಳಿಗೆ ಸಂಬಂಧಿಸಿದ) ವೈರಾಣುಗಳಿಂದ (ವೈರಸ್) ಉಂಟಾಗುತ್ತದೆ. ಅದು ಪ್ರಸ್ತುತ ಸೋಂಕು ತಗುಲಿದ ಹಕ್ಕಿಗಳಿಂದಾಗುವ ವಿಸರ್ಜನೆ, ಉಸಿರಾಟ ಕ್ರಿಯೆ ಮತ್ತು ರಕ್ತದಿಂದ ಹರಡುತ್ತದೆ.
ಕೋಳಿ ಸಾಕಾಣಿಕೆದಾರರಿಗೆ ಮುನ್ನೆಚ್ಚರಿಕೆ ಕ್ರಮಗಳು: ಕೋಳಿ ಸಾಕಾಣಿಕೆದಾರರು ಕೋಳಿ ಫಾರಂಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸೂಕ್ತ ಔಷಧಿಯಿಂದ ಫಾರಂಗಳನ್ನು ಸ್ಯಾನಿಟೈಸ್ ಮಾಡಬೇಕು. ಕೋಳಿಗಳ ಅಸಹಜ ಮರಣದ ಮಾಹಿತಿಯನ್ನು ಪಶುವೈದ್ಯರಿಗೆ ನೀಡಬೇಕು. ಸತ್ತ ಕೋಳಿಗಳ ಮರಣೋತ್ತರ ಪರೀಕ್ಷೆ ಮತ್ತು ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ನೀಡಬೇಕು. ಕಾಡುಹಕ್ಕಿಗಳು ಮತ್ತು ವಲಸೆ ಹಕ್ಕಿಗಳು ಹಿತ್ತಲ ಕೋಳಿ ಅಥವಾ ಫಾರಂ ಕೋಳಿಗಳ ಸಂಪರ್ಕಕ್ಕೆ ಬಾರದಂತೆ ಎಚ್ಚರ ವಹಿಸಬೇಕು. ಸತ್ತ ಕೋಳಿಗಳನ್ನು ಪುಕ್ಕ, ಹಿಕ್ಕೆ, ಒಳ ಅಂಗಾಂಗ ಇತ್ಯಾದಿಗಳನ್ನು ಗುಂಡಿತೋಡಿ ಹೂಳಬೇಕು ಹಾಗೂ ಸರ್ಕಾರದ ಅಧಿಕಾರಿಗಳಿಗೆ ಭೇಟಿ ನೀಡಿ ಪರಿಶೀಲಿಸಲು ಅನುವು ಮಾಡಿಕೊಡಬೇಕು.
ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮಗಳು: ವ್ಯಾದಿಗೊಳಗಾದ ಅಥವಾ ಆಕಸ್ಮಿಕವಾಗಿ ಮರಣ ಹೊಂದಿದ ಹಕ್ಕಿಗಳನ್ನು ಕೈಯಿಂದ ಮುಟ್ಟಬಾರದು. ಮನೆಯಲ್ಲಿ ಸೋಂಕು ತಗುಲಿದ ಹಕ್ಕಿಗಳ ಪುಕ್ಕಗಳನ್ನು ತೆಗೆಯಬಾರದು, ಕೊಲ್ಲಬಾರದು ಅಥವಾ ಕೈಯಿಂದ ಮುಟ್ಟಬಾರದು. ಹಕ್ಕಿಗಳು ವೈರಾಣು ಸೋಂಕನ್ನು ಹೊಂದಿರಬಹುದಾಗಿರುವುದರಿಂದ ಮಕ್ಕಳನ್ನು ಅಂತಹ ಹಕ್ಕಿಗಳನ್ನು ಸ್ಪರ್ಶ ಮಾಡುವುದಕ್ಕಾಗಲಿ ಅಥವಾ ಅವುಗಳೊಂದಿಗೆ ಆಟ ಆಡುವುದಕ್ಕಾಗಲಿ ಅಥವಾ ಸಾಗಿಸುವುದಕ್ಕಾಗಲಿ ಬಿಡಬಾರದು. ಹಕ್ಕಿಗಳನ್ನು ಕೈಯಿಂದ ಮುಟ್ಟಿದ ನಂತರ ಕೈಗಳನ್ನು ಸಾಬೂನಿನಿಂದ ಮತ್ತು ನೀರಿನಿಂದ ತೊಳೆದುಕೊಂಡು ಶುಭ್ರಗೊಳಿಸಿಕೊಳ್ಳಬೇಕು. ಹಕ್ಕಿಗಳನ್ನು ವಿಶೇಷವಾಗಿ ಕೋಳಿ ಮರಿಗಳನ್ನು ಕೈಗಳಿಂದ ಮುಟ್ಟುವ ಸಂದರ್ಭ ಬಂದಾಗ ಮೂಗು ಮತ್ತು ಬಾಯಿಗೆ ವಸ್ತ್ರ/ ಬಟ್ಟೆಯ ಮುಸುಕು ಹಾಕಿಕೊಳ್ಳಬೇಕು. ಹಕ್ಕಿಗಳನ್ನು ಮುಟ್ಟಿದ ನಂತರ ಕೈಗಳಿಂದ ಕಣ್ಣು, ಮೂಗು ಅಥವಾ ಬಾಯಿಯನ್ನು ಉಜ್ಜಿಕೊಳ್ಳಬಾರದು. ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ತಿನ್ನಲು ಉಪಯೋಗಿಸುವ ಮುಂಚಿತವಾಗಿ ಅವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಕೋಳಿಯ ಕಚ್ಚಾ ಉತ್ಪನ್ನಗಳನ್ನು ತಿನ್ನಲು ಉಪಯೋಗಿಸಬಾರದು. ಹಕ್ಕಿಗಳ ಅಸಹಜ ಸಾವಿನ ವಿಷಯ ತಿಳದು ಬಂದರೆ ಕೂಡಲೇ ಸ್ಥಳೀಯ ಅಧಿಕಾರಿಗಳಿಗೆ ವರದಿ ಮಾಡಿ, ಸತ್ತ ಹಕ್ಕಿಗಳನ್ನು ಅಂತ್ಯಗೊಳಿಸುವಲ್ಲಿ ಎಚ್ಚರಿಕೆಯನ್ನು ವಹಿಸುವಂತೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .












