ಇಂದಿನಿಂದ ಉಡುಪಿ ಭಂಡಾರಕೇರಿ ಮಠದಲ್ಲಿ ಪ್ರೋಷ್ಠಪದಿ ಭಾಗವತ ಪ್ರವಚನ

ಉಡುಪಿ: ಉಡುಪಿ ರಥಬೀದಿಯಲ್ಲಿರುವ ಭಂಡಾರಕೇರಿ ಮಠದಲ್ಲಿ ಸೆ. 4ರಿಂದ 16ರವರೆಗೆ ಬೆಳಿಗ್ಗೆ 9 ರಿಂದ 12ರವರೆಗೆ ಪ್ರೋಷ್ಠಪದಿ ಭಾಗವತ ಪ್ರವಚನ ಏರ್ಪಡಿಸಲಾಗಿದೆ ಎಂದು ಭಂಡಾರಕೇರಿ ಮಠದ ಶ್ರಿ ವಿದ್ಯೇಶ ತೀರ್ಥ ಸ್ವಾಮೀಜಿ ತಿಳಿಸಿದರು.

ಉಡುಪಿ ಭಂಡಾರಕೇರಿ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 4 ರಂದು ಬೆಳಗ್ಗೆ 9 ಗಂಟೆಗೆ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸೆ. 16ರಂದು ಸಾಯಂಕಾಲ 5 ಗಂಟೆಗೆ ಪ್ರೋಷ್ಠಪದಿ ಮಂಗಲ ಮಹೋತ್ಸವ ನಡೆಯಲಿದ್ದು, ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅಶೀರ್ವಚನ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಭಾಗವತ ಅಭಿಯಾನದಲ್ಲಿ ತೊಡಗಿಸಿಕೊಂಡವರನ್ನು ಸನ್ಮಾನಿಸಲಾಗುವುದು. 13 ದಿನಗಳ ಕಾಲ 26 ಮಂದಿ ವಿದ್ವಾಂಸರಿಂದ ಭಾಗವತ ಪಾರಾಯಣ ನಡೆಯಲಿದೆ ಎಂದರು.

ಸೆ.17ರಂದು ಸಂಜೆ 5.30ಕ್ಕೆ ಭಾಗವತ ನೀರಾಜನೋತ್ಸವ ಹಾಗೂ 45ನೇ ಚಾತುರ್ಮಾಸ್ಯ ಸಮಾರೋಪ ಸಮಾರಂಭ ನಡೆಯಲಿದೆ. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಅಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಾತುರ್ಮಾಸ್ಯ ಸೇವಾ ಸಮಿತಿಯ ಪ್ರಮುಖರಾದ ಚಂದ್ರಶೇಖರ್​ ಆಚಾರ್ಯ, ರಾಜೇಶ್​ ಭಟ್, ಶ್ರೀನಿವಾಸ ಬಾಧ್ಯ, ವಿಷ್ಣುಪ್ರಸಾದ್​ ಪಾಡಿಗಾರು ಉಪಸ್ಥಿತರಿದ್ದರು.