ಅರ್ಹರಿಗೆ ಸೂರು ಕಲ್ಪಿಸುವ ಯಶ್ ಪಾಲ್ ಸುವರ್ಣರ ಸೇವೆ ಕೂಡಾ ಶ್ರೀ ರಾಮನಿಗೆ ಸಂದ ಸೇವೆ : ಪೇಜಾವರ ಶ್ರೀ

ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮ ದೇವರಿಗೆ ಮಂದಿರ ನಿರ್ಮಾಣದ ಜೊತೆ ಜೊತೆಗೆ ರಾಮ ರಾಜ್ಯದ ನಿರ್ಮಾಣದ ಕನಸಿನಂತೆ ಅರ್ಹ ಕುಟುಂಬಗಳಿಗೆ ಸೂರು ಕಲ್ಪಿಸುವ ಆಶಯದಲ್ಲಿ ತಮ್ಮ ಪುಷ್ಪಾನಂದ ಫೌಂಡೇಶನ್ ಮೂಲಕ ಸುಮಾರು 12 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿದ ಸೇವೆ ಕೂಡಾ ಶ್ರೀರಾಮ ದೇವರಿಗೆ ಸಂದ ಸೇವೆ ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.

ಮಲ್ಪೆ ವಡಭಾಂಡೇಶ್ವರ ವಾರ್ಡಿನ ಶ್ರೀಮತಿ ಸುಶೀಲಾ ರವರಿಗೆ ಶಾಸಕ ಯಶ್ ಪಾಲ್ ಸುವರ್ಣ ರವರು ಪುಷ್ಪಾನಂದ ಫೌಂಡೇಶನ್ ಮೂಲಕ ತಮ್ಮ ಹೆತ್ತವರ ಸ್ಮರಣಾರ್ಥ ನಿರ್ಮಿಸಿದ ಮನೆಯ ಹಸ್ತಾಂತರ ನೆರವೇರಿಸಿ ಆಶೀರ್ವಚನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಪೇಜಾವರ ಶ್ರೀಗಳು ಅಯೋಧ್ಯೆ ಶ್ರೀ ರಾಮ ಮಂದಿರದ ಲೋಕಾರ್ಪಣೆ ಸುಸಂದರ್ಭದಲ್ಲಿ ಅರ್ಹರಿಗೆ ಸೂರು ಕಲ್ಪಿಸುವ ಸಂಕಲ್ಪಕ್ಕೆ ಪೂರಕವಾಗಿ ಕಳೆದ ರಾಮನವಮಿ ಶುಭದಿನದಂದು ಪೇಜಾವರ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿದ ಮನೆ ಇಂದು ಸ್ವಾಮೀಜಿಯವರ ಅಮೃತ ಹಸ್ತದಿಂದ ಸುಸಜ್ಜಿತ ಮನೆಯನ್ನು ನಮ್ಮ ಫೌಂಡೇಶನ್ ಮೂಲಕ ನೀಡುತ್ತಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿಯೂ ಪುಷ್ಪಾನಂದ ಫೌಂಡೇಶನ್ ಮೂಲಕ ಸಮಾಜಮುಖಿ ಕಾರ್ಯಗಳು ನಿತ್ಯ ನಿರಂತರವಾಗಿ ನಡೆಸುವ ಆಶಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಉಪಾಧ್ಯಕ್ಷರಾದ ರಜನಿ ಹೆಬ್ಬಾರ್, ನಗರಸಭಾ ಸದಸ್ಯರಾದ ಲಕ್ಷ್ಮೀ ಮಂಜುನಾಥ, ಶ್ರೀ ಸುಂದರ ಕಲ್ಮಾಡಿ, ವಿಜಯ ಕೊಡವೂರು, ಬಾಲಕೃಷ್ಣ ಶೆಟ್ಟಿ, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷರಾದ ಶ್ರೀ ದಯಾನಂದ ಸುವರ್ಣ, ಕಚ್ಚೂರು ಮಾಲ್ತಿದೇವಿ ದೇವಸ್ಥಾನದ ಗೋಕುಲ್ ದಾಸ್, ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಶಾಸಕರ ಆಪ್ತ ಕಾರ್ಯದರ್ಶಿ ಮಟ್ಟು ಯತೀಶ್ ಕೋಟ್ಯಾನ್ ವಂದಿಸಿದರು.