ಹುಬ್ಬಳ್ಳಿ ಎನ್‌ಕೌಂಟರ್‌ ಕೇಸ್​:ಪಿಎಸ್ಐ ‘ಲೇಡಿ ಸಿಂಗಂ’ಗೆ ಮೆಚ್ಚುಗೆಯ ಸುರಿಮಳೆ.!

ಹುಬ್ಬಳ್ಳಿ: 5 ವರ್ಷದ ಪುಟ್ಟ ಕಂದನನ್ನು ಅತ್ಯಾಚಾರ ಮಾಡಿ ಕೊಲೆ ಪ್ರಕರಣ ಜನರನ್ನು ಸಾಕಷ್ಟು ಘಾಸಿಗೊಳಿಸಿತ್ತು. ಹುಬ್ಬಳ್ಳಿ ಜನರು ಆರೋಪಿ ರಿತೇಶ್​ನನ್ನು ತಮ್ಮ ಕೈಗೊಪ್ಪಿಸುವಂತೆ ಒತ್ತಾಯಿಸಿದ್ದರು. ಬಳಿಕ ಸ್ಥಳ ಪರಿಶೀಲನೆ ವೇಳೆ ಪೊಲೀಸರ ಮೇಲೆಯೇ ದಾಳೆಗೆ ಮುಂದಾದ ಆರೋಪಿಗೆ ಪಿಎಸ್​ಐ ಅನ್ನಪೂರ್ಣ ಗುಂಡು ಹಾರಿಸಿದ್ದರು. ಯಾವಾಗ ಅನ್ನಪೂರ್ಣ ಅಂತಿಮ ತೀರ್ಪು ನೀಡಿದರೋ ಜನರು ಬಹುಪರಾಕ್ ಕೂಗಿದರು.

ಈ ಲೇಡಿ ಸಿಂಗಂ ಯಾರು?:
ಬಾಲಕಿಯ ಹತ್ಯೆ ಆರೋಪಿಯ ಎನ್‌ಕೌಂಟರ್‌ ಪ್ರಕರಣ ಇದೀಗ ದೇಶಾದ್ಯಂತ ಚರ್ಚೆಯಾಗುತ್ತಿದೆ. ಮಹಿಳಾ ಪಿಎಸ್​ಐ, ಲೇಡಿ ಸಿಂಗಂ ಅನ್ನಪೂರ್ಣಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ಇವರು ಹುಟ್ಟಿದ್ದು ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಗುಜನಟ್ಟಿ ಗ್ರಾಮದಲ್ಲಿ, ಅನ್ನಪೂರ್ಣ ‌ಆರ್.ಮುಕ್ಕಣ್ಣವರ ಎಂಎಸ್​ಸಿ ಪದವೀಧರೆ. 2018ನೇ ಬ್ಯಾಚ್​ನ ಪೊಲೀಸ್ ಅಧಿಕಾರಿ ಆಗಿದ್ದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದ ಅನ್ನಪೂರ್ಣ, ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್ಸಿ ಪದವಿ ಪಡೆದುಕೊಂಡರು. ಬಳಿಕ ಎಂಎಸ್​ಸಿಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದರು. ಬಾಲ್ಯದಲ್ಲೇ ತಂದೆಯನ್ನ ಕಳೆದುಕೊಂಡ ಅನ್ನಪೂರ್ಣ, ತಾಯಿ ನೆರಳಿನಲ್ಲಿ ಬೆಳೆದು ಪಿಎಸ್‌ಐ ಆಗಿದ್ದಾರೆ. ಸದ್ಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪಿಎಸ್​ಐ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ದೇಶದ ಜನರ ಮನ ಗೆದ್ದಿರುವ ಅನ್ನಪೂರ್ಣ ಅವರಿಗೆ ಅಭಿನಂದನೆಗಳ ಸುರಿ ಮಳೆ ಶುರುವಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಪಿಎಸ್ಐ ಅನ್ನಪೂರ್ಣ ಸದ್ಯ ಹುಬ್ಬಳ್ಳಿ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಚಿವ ಸಂತೋಷ್ ಲಾಡ್​ ಮೆಚ್ಚುಗೆ:
ಹಂತಕನಿಗೆ ಗುಂಡು ಹೊಡೆದ PSIಗೆ ಸಚಿವ ಸಂತೋಷ್ ಲಾಡ್​ ಸೆಲ್ಯೂಟ್ ಹೊಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ಇಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದ ಸಚಿವ ಲಾಡ್, ಫೈರಿಂಗ್​ನಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿ ಆರೋಗ್ಯ ವಿಚಾರಿಸಿದರು. ಈ ಸಮಯದಲ್ಲಿ ಗುಂಡೇಟು ಹೊಡೆದ ಹುಬ್ಬಳ್ಳಿಯ ಅಶೋಕನಗರ ಠಾಣೆ ಪಿಎಸ್ಐ​ ಅನ್ನಪೂರ್ಣಗೆ ಸೆಲ್ಯೂಟ್ ಹೊಡೆದರು.

ಮುಗಿಲು ಮುಟ್ಟಿದ ಆಕ್ರಂದನ:
ಹುಬ್ಬಳ್ಳಿ ನಗರದ ದೇವಾಂಗಪೇಟ್​ನ ರುದ್ರಭೂಮಿಯಲ್ಲಿ ಕಂದಮ್ಮನ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಹೆತ್ತವರ ನೋವು ಹೇಳತೀರದಾಗಿತ್ತು. ಸರ್ಕಾರ ಮೃತ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಿದೆ.