“ಸಮಾನತೆಯಿಂದ ಜಗತ್ತಿನ ಪ್ರಗತಿ” ಎಂಬ ವಿಷಯದ ಕುರಿತು ಉಪನ್ಯಾಸ.

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಕೋಶವು ಎನ್‍ಸಿಸಿ ಘಟಕದ ಸಹಯೋಗದೊಂದಿಗೆ ಮಹಿಳಾ ದಿನಾಚರಣೆಯ ಅಂಗವಾಗಿ ದಿನಾಂಕ 17 ಮೇ 2024 ರಂದು ಸಮಾನತೆಯಿಂದ ಜಗತ್ತಿನ ಪ್ರಗತಿ” ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಮಾಜಿ ಉಪ ಪ್ರಾಂಶುಪಾಲರಾದ ದೀಪಾ ಭಂಡಾರಿಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ದೀಪಾ ಭಂಡಾರಿಯವರು ಮಹಿಳಾ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿ, ಮಹಿಳೆಯರ ಬಗೆಗಿನ ಗೌರವವು ಮಹಿಳಾ ದಿನಾಚರಣೆಯಂದು ಮಾತ್ರ ಸೀಮಿತವಾಗಿರಬಾರದು ಎಂದು ತಿಳಿಸಿದರು. ಈ ವರ್ಷದ ಮಹಿಳಾ ದಿನವನ್ನು, “ಮಹಿಳೆಯರನ್ನು ಜಗತ್ತಿಗೆ ಹೊಂದಿಕೊಳ್ಳುವ ಬಗ್ಗೆ ಯೋಚಿಸಬೇಡಿ, ಬದಲಿಗೆ ಜಗತ್ತು ಮಹಿಳೆಯರಿಗಾಗಿ ಹೊಂದಿಕೊಳ್ಳುವ ಬಗ್ಗೆ ಯೋಚಿಸಿ” ಎಂಬ ಘೋಷಣೆಯೊಂದಿಗೆ ಆಚರಿಸಲಾಗಿದೆ ಎಂದರು. ಇವರು ಲಿಂಗ ಸಮಾನತೆಯ ಬಗ್ಗೆ ಮಾತನಾಡಿ ಇಂದಿನ ದಿನಗಳಲ್ಲಿ ಮಹಿಳೆಯರು ತಮ್ಮ ಸಾಮರ್ಥ್ಯ ಮತ್ತು ಜ್ಞಾನದಿಂದಾಗಿ ಎನ್ ಸಿ ಸಿ ಘಟಕ, ಶಿಕ್ಷಣ ಕ್ಷೇತ್ರ, ಅಗ್ನಿಶಾಮಕದಳ, ಯುದ್ಧ ವಿಮಾನದಲ್ಲಿ ಪೈಲೆಟ್‍ಗಳಾಗಿ ಎಲ್ಲಾ ಕ್ಷೇತ್ರದಲ್ಲಿ ಸಮಾನ ಅವಕಾಶವನ್ನು ಹೊಂದಿದ್ದಾರೆ. ಸಮಾಜದ ಪ್ರಗತಿಗಾಗಿ ಮಹಿಳೆಯರು ಮತ್ತು ಪುರುಷರು ಸಮಾನವಾಗಿ ಕೆಲಸ ಮಾಡಲು ಬೇಕಾದ ಆತ್ಮಸ್ಥೈರ್ಯವನ್ನು ಬೆಳೆಸಲು ಸಲಹೆಯನ್ನು ನೀಡಿದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಇವರು ವಿದ್ಯಾರ್ಥಿಗಳಿಗೆ ಇಂತಹ ಉಪನ್ಯಾಸದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ವಿದ್ಯಾರ್ಥಿನಿಯಾದ ನಿಧಿ ಪಾಟ್ಕರ್ ಕಾರ್ಯಕ್ರಮವನ್ನು ನಿರೂಪಿಸಿದರು. ಮಹಿಳಾ ಸಬಲೀಕರಣ ಕೋಶದ ಸಂಯೋಜಕಿಯಾದ ಡಾ. ದೀಪಿಕಾ ಬಿ ವಿ ಕಾರ್ಯಕ್ರಮವನ್ನು ಆಯೋಜಿಸಿದರು.