ಶಂಕರಾಚಾರ್ಯರ ಅದ್ವೈತ ತತ್ವ ಮತ್ತು ಸಿದ್ಧಾಂತಗಳು ಸರ್ವಕಾಲಕ್ಕೂ ಪ್ರಸ್ತುತ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ: ಆಧ್ಯಾತ್ಮಿಕ ಚಿಂತಕರಾದ ಶಂಕರಾಚಾರ್ಯರ ಅದ್ವೈತ ತತ್ವ ಮತ್ತು ಸಿದ್ಧಾಂತಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.

ಶಂಕರಾಚಾರ್ಯರು ಅದ್ವೆöÊತ ಸಿದ್ಧಾಂತವನ್ನು ದೇಶದಾದ್ಯಂತ ಪ್ರಚಾರ ಮಾಡುವ ಸಂದರ್ಭದಲ್ಲಿ ಅನೇಕ ಮಠಗಳನ್ನು ಸ್ಥಾಪಿಸಿದ್ದಾರೆ. ಅವುಗಳಲ್ಲಿ ಶೃಂಗೇರಿಯ ಶಾರದ ಮಠ, ಓರಿಸ್ಸಾದ ಪುರಿಯ ಗೋವರ್ಧನ ಮಠ, ಗುಜರಾತ್‌ನ ಕಾಳಿಕಾ ಮಠ ಹಾಗೂ ಉತ್ತರಾಖಂಡ್‌ನ ಜ್ಯೋತಿರ್ ಮಠ ಪ್ರಮುಖವಾದುದು. ಜೊತೆಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಶಂಕರಾಚಾರ್ಯರ ಆಲೋಚನೆಗಳು ಹಾಗೂ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಅರ್ಪಿಸೋಣ ಎಂದರು. ಪತ್ರಕರ್ತ ಕಿರಣ್ ಮಂಜನಬೈಲು ಶಂಕರಾಚಾರ್ಯರ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಕೇರಳದ ಕಾಲಡಿಯಲ್ಲಿ ಜನಿಸಿದ ಶಂಕರರು ಅನೇಕ ರೀತಿಯ ಪವಾಡಗಳನ್ನು ಮಾಡಿದ್ದಾರೆ ಎಂದು ಚರಿತ್ರೆಗಳು ಹಾಗೂ ಪುರಾಣಗಳಲ್ಲಿ ಉಲ್ಲೇಖವಾಗಿವೆ. ವೇದಗಳು, ಉಪನಿಷತ್ತುಗಳು ಹಾಗೂ ಪುರಾಣಗಳು ಶಂಕರಾಚಾರ್ಯರರಲ್ಲಿ ನಡೆದಾಡುವ ಗ್ರಂಥಾಲಯದ ರೂಪದಲ್ಲಿತ್ತು ಎಂದು ತತ್ವಜ್ಞಾನಿಗಳು ನಂಬಿದ್ದರು ಎಂದರು. ಸಮಾಜ ಸುಧಾರಣೆಗಾಗಿ ಶ್ರಮಿಸಿದ್ದ ಇವರು, ಪ್ರಾಣಿಬಲಿಯನ್ನು ಖಂಡಿಸಿದ್ದರು. ಈಶ್ವರ, ವಿಷ್ಣು, ದೇವಿ, ಗಣಪತಿ ಮತ್ತು ಸೂರ್ಯ ಈ ಐದು ದೇವತೆಗಳನ್ನು ಪ್ರಧಾನವಾಗಿಟ್ಟುಕೊಂಡು ಪೂಜೆ ಮಾಡುವ ಪಂಚಾಯತರ ಪೂಜಾ ಪದ್ಧತಿಯನ್ನು ಆರಂಭಿಸಿದ್ದರು. ಸಮ ಸಮಾಜದ ಆಶಯವನ್ನು ವ್ಯಕ್ತಪಡಿಸಿದ ಮೊಟ್ಟಮೊದಲಿಗರು ಆಚಾರ್ಯ ಶಂಕರರು. ಅಹಂ ಬ್ರಹ್ಮಾಸ್ಮಿ ತತ್ವವನ್ನು ಸಾರಿ ಜನಸಾಮಾನ್ಯರಿಗೆ ಭಕ್ತಿ, ಜ್ಞಾನ ಮತ್ತು ಕರ್ಮ ಸಿದ್ಧಾಂತವನ್ನು ಬೋಧಿಸುವುದರ ಮೂಲಕ ಶ್ಲೋಕಗಳು ಹಾಗೂ ಉಪನಿಷತ್ತುಗಳನ್ನು ಅಂದಿನ ಕಾಲದ ಸುಲಭ ಭಾಷೆಯಾದ ಸಂಸ್ಕೃತದಲ್ಲಿ ಬೋಧಿಸಿದ್ದಾರೆ. ಇಂತಹ ಶಂಕರಾಚಾರ್ಯರು ಭಾರತೀಯ ಸನಾತನ ಧರ್ಮದ ಪುನರುದ್ಧಾನದ ಮೇರು ವ್ಯಕ್ತಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ತತ್ವಜ್ಞಾನಿಗಳಲ್ಲಿ ಮೇರು ವ್ಯಕ್ತಿ ಶಂಕರಾಚಾರ್ಯರು. ಶಂಕರರ ಸಿದ್ಧಾಂತಗಳು ಮನುಷ್ಯರ ಅಭ್ಯುಧ್ಯಯಕ್ಕೆ ದಾರಿದೀಪವಾಗಿದೆ. ವ್ಯಕ್ತಿತ್ವದ ವಿಕಸನಕ್ಕೆ ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ನಡೆಯಬೇಕು. ಶಂಕರರ ತತ್ವ, ಆದರ್ಶಗಳು ನಮ್ಮ ಜೀವನವನ್ನು ಸುಗಮಗೊಳಿಸುವುದರೊಂದಿಗೆ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗಿವೆ ಎಂದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ, ಬ್ರಹ್ಮಾವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸವಿತಾ ಎರ್ಮಾಳು, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ವಿಶ್ವನಾಥ, ಮಹೇಶ್, ಜಿಲ್ಲಾಡಳಿತದ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿದರೆ, ಕನ್ನಡ ಉಪನ್ಯಾಸಕ ರಾಮಾಂಜಿ ವಂದಿಸಿದರು.