ಲಾರಿ-ಕ್ರೂಸರ್‌ ನಡುವೆ ಭೀಕರ ರಸ್ತೆ ಅಪಘಾತ: ಮಹಾ ಕುಂಭಮೇಳದಲ್ಲಿ ಸ್ನಾನ ಮುಗಿಸಿ ಕಾಶಿಗೆ ತೆರಳುತ್ತಿದ್ದ ಬೀದರ್ ನ ಐವರು ಸ್ಥಳದಲ್ಲೇ ಮೃತ್ಯು.

ಲಕ್ನೋ: ಉತ್ತರ ಪ್ರದೇಶದ ಕಾಶಿ ಬಳಿ ಕರ್ನಾಟಕ ಬೀದರ್ ಮೂಲದ ಒಂದೇ ಕುಟುಂಬದ 5 ಜನ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಇಂದು ಬೆಳಗ್ಗೆ ಲಾರಿ ಮತ್ತು ಕ್ರೂಸರ್‌ ನಡುವೆ ಮಿರಜಾಪೂರ್ ಜಿಲ್ಲೆಯ ರೂಪಾಪೂರ ಬಳಿ ಅಪಘಾತ ಸಂಭವಿಸಿದೆ. 5 ಮಂದಿ ಸಾವನ್ನಪ್ಪಿದ್ದು 7 ಮಂದಿ ಗಾಯಗೊಂಡಿದ್ದಾರೆ.

ಬೀದರ್ ನಗರದ ಲಾಡಗೇರಿ ಬಡಾವಣೆಯ ನಿವಾಸಿಗಳಾದ ಸುನೀತಾ(35) ಸಂತೋಷ್‌ (43) ನೀಲಮ್ಮ (60) ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮಗು ಕೂಡ ಮೃತ ಪಟ್ಟಿದೆ.

ಪ್ರಯಾಗ್‌ರಾಜ್‌ ಕುಂಭಮೇಳಕ್ಕೆ ಒಂದೇ ಗಾಡಿಯಲ್ಲಿ ಒಟ್ಟು 14 ಜನ ಕುಂಭ ಮೇಳಕ್ಕೆ ತೆರಳಿದ್ದರು. ಪುಣ್ಯ ಸ್ನಾನ ಮಾಡಿದ ಬಳಿಕ ಪ್ರಯಾಗ್‌ರಾಜ್‌ನಿಂದ ಕಾಶಿ ಕಡೆಗೆ ಕ್ರೂಸರ್‌ನಲ್ಲಿ ತೆರಳುತ್ತಿದ್ದರು. ಇಂದು ಬೆಳಗ್ಗೆ ಕಾಶಿಯಿಂದ 20 ಕಿಲೋ‌ ಮೀಟರ್‌ ದೂರದಲ್ಲಿ ಲಾರಿಗೆ ಹಿಂದಿನಿಂದ ಕ್ರೂಸರ್‌ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಉಳಿದವರ ಸ್ಥಿತಿ ಗಂಭೀರವಾಗಿದೆ.