ಉಡುಪಿ: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒತ್ತಾಯಿಸಿದರು.
ಉಡುಪಿ ಶ್ರೀಕೃಷ್ಣಮಠಕ್ಕೆ ಇಂದು ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಕೆಗೆ ರಾಜ್ಯ ಸರ್ಕಾರದ ಅಧಿಕಾರಿಗಳು ಎಸ್ಕಾರ್ಟ್ ಕೊಟ್ಟಿದ್ದಾರೆ. ಪ್ರೋಟೋಕಾಲ್ ವ್ಯವಸ್ಥೆ ಮಾಡಿ ಚೆಕ್ಕಿಂಗ್ ಇಲ್ಲದೆ ಬಿಟ್ಟಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ರಾಜ್ಯದ ಮಂತ್ರಿಗಳ ಹೆಸರು ಕೇಳಿ ಬರುತ್ತಿದೆ. ಮಂತ್ರಿಗಳ ಪಾತ್ರ ಇದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ರಾಜ್ಯ ಸರ್ಕಾರ ಚಕಾರ ಎತ್ತುತ್ತಿಲ್ಲ ಎಂದರು.
ಗೃಹ ಸಚಿವ ಪರಮೇಶ್ವರ್ ಮೊದಲು ಈ ಪ್ರಕರಣವನ್ನು ಸಿಐಡಿ ತನಿಖೆಗೆ ಕೊಟ್ಟರು. ರಾಮಚಂದ್ರ ರಾವ್ ಡಿಜಿಐ ಆಗಿರುವುದರಿಂದ ಅಡಿಷನಲ್ ಚೀಫ್ ಸೆಕ್ರೆಟರಿಗೆ ಕೊಟ್ಟಿದ್ದೇವೆ ಎಂದರು. ಕಸ್ಟಮ್ ತಪ್ಪಿಸಿ ಪ್ರೋಟೋಕಾಲ್ ಮೂಲಕ ಹೇಗೆ ಕರೆತರಲಾಯಿತು?. ಭಾರತ ಸರಕಾರದ ಇಂಟೆಲಿಜೆನ್ಸ್ ಬರುವವರೆಗೆ ನಿಮ್ಮ ಇಂಟೆಲಿಜೆನ್ಸ್ ಏನು ಮಾಡುತ್ತಿತ್ತು?. ಈ ಥರದ ಹಲವಾರು ಪ್ರಶ್ನೆಗಳಿವೆ. ಈ ಥರದ ದುಡ್ಡು ಬಂಗಾರಗಳು ಸಮಾಜ ವಿದ್ರೋಹಿ ಕೃತ್ಯಕ್ಕೆ ಬಳಕೆಯಾಗುತ್ತದೆ. ಹೀಗಾಗಿ ರಾಜ್ಯ ಸರಕಾರ ಈ ಬಗ್ಗೆ ಗಂಭೀರವಾಗಿ ಇರಬೇಕು ಎಂದು ಹೇಳಿದರು.












