ಉಡುಪಿ: ರಾಜ್ಯ ಸರಕಾರದ ಯುವನಿಧಿ ಯೋಜನೆಗೆ ನೋಂದಣಿ ಚಾಲ್ತಿಯಲ್ಲಿದ್ದು, ಅರ್ಹರು ಸೇವಾ ಸಿಂಧು ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ನೋಂದಣಿ
ಮಾಡಿಕೊಳ್ಳಬಹುದಾಗಿದೆ.
2022-23 ನೇ ಹಾಗೂ ಅನಂತರದ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ (ವೃತ್ತಿಪರ ಸೇರಿದಂತೆ) ಹಾಗೂ ಯಾವುದೇ ಡಿಪ್ಲೋಮಾ ಪಡೆದು ನಿರುದ್ಯೋಗಿ ಯಾಗಿರುವವರು ಯುವನಿಧಿ ಯೋಜನೆಯ ಮೂಲಕ ಪ್ರತಿ ತಿಂಗಳು ಪದವೀಧರ ನಿರುದ್ಯೋಗಿಗಳಿಗೆ ರೂ 3,000 ಹಾಗೂ ಡಿಪ್ಲೋಮಾ ಪಡೆದ ನಿರುದ್ಯೋಗಿ ಗಳಿಗೆ ರೂ.1,500 ನೇರ ನಗದು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
ಪ್ರತಿ ತಿಂಗಳು ಸ್ವಯಂ ಘೋಷಣೆ ಕಡ್ಡಾಯ:
ಯುವನಿಧಿ ಯೋಜನೆಯ ಫಲಾನುಭವಿಗಳು ಪ್ರತಿ ತಿಂಗಳ 25ನೇ ತಾರೀಕಿನ ಒಳಗಾಗಿ ಆನ್ಲೈನ್ನಲ್ಲಿ ಲಾಗಿನ್ ಆಗಿ ಸ್ವಯಂ ಘೋಷಣೆ ನೀಡಬೇಕು. ಸ್ವಯಂ ಘೋಷಣೆ ನೀಡದಿದ್ದಲ್ಲಿ ಆ ತಿಂಗಳ ನೇರ ನಗದು ಖಾತೆಗೆ ಜಮೆಯಾಗುವುದಿಲ್ಲ. ಆದ್ದರಿಂದ ಫಲಾನುಭವಿಗಳು ತಪ್ಪದೇ ಸೇವಾ ಸಿಂಧು ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಪ್ರತಿ ತಿಂಗಳು ಸ್ವಯಂ ಘೋಷಣೆ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣ, ಬಿ. ಬ್ಲಾಕ್,
ಮೊದಲನೆ ಮಹಡಿ, ರಜತಾದ್ರಿ, ಮಣಿಪಾಲ ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.












